November 30, 2013

ಬೆಂಕಿಯಿಂದ ಬೆಂಕಿಗೆ
ಬದುಕು,
ಮಧ್ಯೆ ಮಾತ್ರ
ಬರೀ ಹಬೆ!

November 29, 2013


ಸಂಪಾದಕರು
ವಿಮರ್ಶಕರು
ಅದೆಷ್ಟೇ ಆಧುನಿಕರಾದರೂ
ಕಡೆಗೆ ಹುಡುಕುವುದು
ಒಳ್ಳೆಯ ಕವಿತೆಯನ್ನೇ!!!


**************

ಬಿಳಿ ಬಿಳಿ ಹಾಲಲ್ಲೂ
ಹಾಳಾಗಬಲ್ಲ
ಅನೈತಿಕತೆ!!!



**************

ಪೂರ್ತಿಯಾಗು ಅಂದರೆ
ನಿಂತಲ್ಲೇ ಅಂತ್ಯ
ಉದ್ಧಟ ಕವಿತೆಗೆ!


**************

ಪಡೆದು ತೀರಿದ ಸುಖ
ಬರೆದು ಮುಗಿಸಿದ ಕವಿತೆ
ವ್ಯರ್ಥ!



November 27, 2013

ದೇಶ ಬೆಳಗುತ್ತಿದೆ!
ಉರಿಯಲು ಹಗೆಯಿದೆ
ಉರಿಸಲು ಮೌಢ್ಯವಿದೆ
ಹಗುರಾಗಿ ಹಾರಲು
ಅಗಾಧ ಹಸಿವಿದೆ...
ಬೆಂಕಿ
ಅಭಿವೃದ್ಧಿಯ ವಿಳಾಸವಂತೆ!

November 25, 2013

ಹಿಂದುವೆಂದು
ಗರ್ವದಿಂದ ಘರ್ಜಿಸುವಾತ
ತಾನೊಬ್ಬ ಮನುಷ್ಯನೆಂದು
ಕನಸಿನಲ್ಲಿಯೂ ಪಿಸುಗುಟ್ಟಲಾರ!!!

November 24, 2013

ಹಳ್ಳಿ ಹಂಚಿನ ಮನೆಯಲ್ಲಿ
ತೋಟದ ಕೆಲಸ ಮುಗಿಸಿ
ತಲೆದಿಂಬಿಗೊರಗಿದ ಅಪ್ಪ
ಮಗನಲ್ಲಿ ಕಾಣುವ ಪ್ರತೀ ಕನಸಲ್ಲಿ
ರೈತನೊಬ್ಬನ ಕೊಲೆ!
ಎಚ್ಚರಾದದ್ದು ವೃದ್ಧಾಶ್ರಮದ
ಬೃಹತ್ ಕಿಟಕಿಯ ಬಿಸಿಲಿಗೆ!!!

November 23, 2013

ಇಲ್ಲಿ
ಎಲ್ಲ ಥರದವರೂ ಇದ್ದಾರೆ.
ಹವಿಸ್ಸು ತಿಂದು ಕೊಬ್ಬಿರುವ ದೇವರು
ಮತ್ತು
ಕಸ ತಿಂದು ಕೊಬ್ಬಿರುವ ಹಂದಿ;
ಬಿಳಿ ಧೋತ್ರ ಕೊಳಕಾಗಿಸಿಕೊಂಡ ವೈದಿಕರು
ಮತ್ತು
ಕೆಸರು ಗದ್ದೆಯಲಿ ಚಂದವಾಗಿರುವ ರೈತರು!!!

ಮೆಚ್ಚಿದ ಪುಸ್ತಕ

ದೇವನೂರು ಮಹಾದೇವರ 'ಎದೆಗೆ ಬಿದ್ದ ಅಕ್ಷರ' ಓದುತ್ತಿದ್ದೇನೆ. ಮೇಲ್ವರ್‍ಗದ,ಮೇಲ್ಜಾತಿಯ ಬಹುತೇಕ ಮಂದಿ ಕಾಣದ ಮತ್ತು ಕಾಣಬಯಸದ ಜಗತ್ತನ್ನು ತೆರೆದಿಡುವ ಪುಸ್ತಕ ಇದು..ಇಲ್ಲಿ ಆಳುವವರ ಬಗ್ಗೆ ಆಕ್ರೋಶವಿದೆ,ಆದರೆ ಅದು ಸಿದ್ಧಲಿಂಗಯ್ಯನವರ ಕವನಗಳಲ್ಲಿರುವಂತೆ ಕೊಚ್ಚು,ಮುರಿ ಅನ್ನುವಂಥದ್ದಲ್ಲ..ಬದಲಿಗೆ ಸಮಾನತೆಯ ಕನಸನ್ನು ಪ್ರತೀ ಕ್ಷಣವೂ ಕಾಣುವಂಥದ್ದು.. ನೂರಾರು ವರ್ಷಗಳಿಂದ ಕಾಪಾಡಿಕೊಂಡು ಬಂದ ಕೀಳು ಮನಸ್ಸಿನಿಂದ ಇನ್ನಾದರೂ ಹೊರಬರೋಣ ಎನ್ನುವಂಥದ್ದು...ಧರ್ಮದ ನೆಲಗಟ್ಟಿನ ಮೇಲೆ ದೇಶ ಕಟ್ಟಲು ಹೊರಟಿರುವ ಕುರುಡರ ಸಂತೆಯ ಮಧ್ಯೆ ಈ ಕಾರಣಕ್ಕಾಗಿಯೇ ದೇವನೂರು ಅತ್ಯಗತ್ಯವೆನಿಸುತ್ತಾರೆ...

November 21, 2013

ಪ್ರತಿಷ್ಥೆ,ಇಸಮ್ಮು
ವಾದ ವಿವಾದಗಳೆಲ್ಲ
ಬರೆದವರಿಗೆ;
ಈ ಪುಸ್ತಕಗಳು
ಕೊಂಡವರ ಜತೆ
ಆರಾಮಾಗಿ ಇದ್ದುಬಿಡುತ್ತವೆ!!!

*****************

ನೀರಂತೆ
ಕಾವ್ಯ
ಕುಡಿಯಲೇಬೇಕು!

*****************

ಕರಾವಳಿಯ
ಮಳೆ,ಬಿಸಿಲು
ಬಂದರೆ ಸಾಕೆಂದರೂ
ಮುಗಿಯುವುದಿಲ್ಲ
ಕಾವ್ಯದಂತೆ!

November 17, 2013

‌ನನಗೆ
ನನ್ನ ತೋರಿಸುವ
ಕನ್ನಡಿಯ ಬೆನ್ನ ಹಿಂದೆ
ಯಾರಿಗೂ ಕಾಣದ
ಅನಾಥ ಬಯಲು!

****************

ತುಂಬ ಕಾಯಿಸಬೇಡ ಗೆಳತಿ,
ಉಕ್ಕಿ ಚೆಲ್ಲೀತು
ಹಾಲು!

****************

ಪ್ರತೀ ಚೂರು
ಅಕ್ಷರದ ಬೆನ್ನಿಗೆ
ಏನೂ ಹುಟ್ಟದ
ಬರಡು ಸ್ಥಿತಿ... 

****************

ಕೆಟ್ಟದಾಗಿದ್ದರೂ
ಅನುಭವಗಳು
ಒಳ್ಳೆಯದು...

****************

ಬೆಳಕೆಂದರೆ ಬೆಳಕು
ಕತ್ತಲೆಂದರೆ ಕತ್ತಲು
ಬೇಕಾದ್ದು ಕಾಣುವುದು
ಕಣ್ಣಲ್ಲಿ ಮಾತ್ರ!

November 16, 2013

ಸಂತೆ

ಇವರೆಲ್ಲರೂ ಅವರೇ 
ಬೆಳಕ ಕಾಣದ ಬಿಳಿ ಹುಡುಗಿ 
ದೃಷ್ಟಿ ಬೊಟ್ಟಿಡದ ಕಪ್ಪು ಹುಡುಗಿ
 ಪೊರಕೆಗಳ ಹೊತ್ತ ಘಾಟಿ ಮುದುಕಿ 
ಸೊಪ್ಪು ಮಾರುವ ಪುಟ್ಟ ಕಿರಣ 
'ಧಾ ರೂಪಾಯ್ ಪನ್ನಾಸ್'
'ರುಚಿ ನೋಡಿ ರೇಟು ಮಾಡಿ'
ಹರಕು ಚಪ್ಪಲಿಯ ಹುಳುಕು ಅರ್ಚಕ 
ಕಡ್ಡಿ ಗಡ್ಡದ ಬುಡಾನ್ ಸಾಬಿ 
ಕಿರಾಣಿ ಅಂಗಡಿಯ ತಕರಾರುಕರ 
ದೊಗಳೆ ಅಂಗಿಯ ಕುಳ್ಳ ಮಾಸ್ತರ 
ಪ್ಯಾಂಟು ನೈಟಿ ಇತರೆ ವಸ್ತ್ರ 
ಇಪ್ಪತ್ತು ರೂಪಾಯಿಗೆ ಗಿಣಿ ಶಾಸ್ತ್ರ 
ಬೋಂಡ ಹಪ್ಪಳ ಹಂದಿ ಸೊಳ್ಳೆ 
ಹೂವು ಸಗಣಿ ಈರುಳ್ಳಿ ಬಳೆ 
ಬೇರು ವಾಚು ಒಣಗಿದ ಮೀನು 
ಕನ್ನಡಿ ಬೂದಿ ಗುಡ್ಡದ ಜೇನು 
ಅಮ್ಮನ ಕುಂಕುಮ ಫ್ರೇಮಿನ ರಾಮ 
ಹಾಡುವ ಸೀತೆ ಬೇಡುವ ಹನುಮ... 

ಇವರೆಲ್ಲರೂ ಅವರೇ 
ತಪ್ಪುಗಳ ಮಧ್ಯೆ ಹುಟ್ಟಿ 
ತಪ್ಪುತ್ತಲೇ ಬೆಳೆದು 
ಒಪ್ಪಿಸಲಾಗದೆ ಓಡಿ 
ಹೊಟ್ಟೆ ತುಂಬಲು 
ಮಾರಾಟಕ್ಕಿಳಿದವರು. 

ಇರುವ ತಪ್ಪಿಗೆ 
ಕಿರುಚಿ ನಾರುವ ಈ ಬೀದಿ 
ನಿನ್ನೆ ಖಾಲಿ ನಾಳೆಯೂ ಖಾಲಿ.

ಅದೇ ಮುಖದ ಅದೇ ಚೌಕಾಸಿಯ 
ಅದೇ ತೂಕದ ಅದೇ ಲೆಕ್ಕದ 
ಲಾಭ ನಷ್ಟದ 
ದಣಿವು ಕಾಣದ 
ಅದೇ ಸಂತೆಯ ಅದೇ ವ್ಯಾಪಾರ 
ಈ ಕ್ಷಣದ ಸತ್ಯ,
ಕಳೆದುಹೋಗುವ ಮುನ್ನ 
ಕೊಂಡುಕೊಳ್ಳಿ!
ಹೊಸತಾಗಿ ಬರೆಯಬೇಕೆಂದುಕೊಂಡವ
ಹಳತನ್ನೇನಾದರೂ ಓದಿಬಿಟ್ಟರೆ 
ಅದು ಅವನ ಸಾವು!!!

*************************

ಜೈಲಲ್ಲಿ ಆರಾಮಾಗಿ
ನಿದ್ದೆ ಮಾಡುವವನು 
ಸ್ವರ್ಗ ಸೇರಲು 
ಪುಣ್ಯ ಮಾಡಬೇಕಿಲ್ಲ!!!