June 9, 2013

ಈ ಮಧ್ಯರಾತ್ರಿ
ಸುಮ್ಮನೆ ಕೂರುವ
ಸೊಳ್ಳೆ ಹೊಡೆಯುವ
ಆಕಳಿಸುವ
ನೋಡುವ
ಓದುವ
ಕೇಳುವ
ಹರಟುವ
ಆಡುವ
ಅಲೆವ
ಕಳೆವ
ಬದಲು
ಬರೆ-
ಯುತ್ತಿದ್ದೇನೆ!!!
ಏಳು,ತಿನ್ನು
ಕೆಲಸ ಮಾಡೆಂದ ಅಮ್ಮ
ಬರೆ ಅನ್ನಲಿಲ್ಲ.
ಹೊಸ ಹೆಂಡತಿಯಂತೆ
ಮುನಿಸಿಕೊಂಡು ಕವಿತೆ ಕೇಳುತ್ತಿದೆ
'ಆರು ಹಿತವರು ನಿನಗೆ
ನಮ್ಮೀರ್ವರೊಳಗೆ?!!!'

June 5, 2013

ಖ್ಯಾತ ಪಂಜಾಬಿ ಲೇಖಕಿ ಅಮೃತಾ ಪ್ರೀತಮ್ ರ 'ಸುನೇರಿ'ಯನ್ನು ಮತ್ತೆ ಓದುತ್ತಿದ್ದೇನೆ. ತುಂಬಾ ಇಷ್ಟವಾದದ್ದು ಲೇಖಕಿಯ ironic language. ಉದಾಹರಣೆಗೆ,

' ಈ ಭೂಮಿ_
ಒಂದು ಸುಂದರ ಪುಸ್ತಕ.
ಸೂರ್ಯ ಚಂದ್ರರೇ ಅದರ ರಕ್ಷಾಪತ್ರ.

ಆದರೆ_
ಹಸಿವು
ಬಡತನ
ದಾಸ್ಯ...

ದೇವರೇ,
ಇದೇನು ನಿನ್ನ ಪ್ರವಚನಗಳೆ?
ಅಥವಾ
ಬರಿಯ ಅಚ್ಚಿನ ತಪ್ಪುಗಳೆ? '

ಸುಮ್ಮನೆ ಕೂತಾಗ ಓದಿ ಅನುಭವಿಸಬಹುದಾದ ಇಂಥ ಹಲವು ಕವನಗಳು 'ಸುನೇರಿ'ಯಲ್ಲಿವೆ. ಮಡಿವಂತಿಕೆಯಿಂದ ದೂರದಲ್ಲಿಯೇ ಉಳಿಯುವ ಅಮೃತಾ ಪ್ರೀತಮ್ ಓದುಗರಿಗೆ ಆಪ್ತವಾಗುತ್ತಾರೆ. ಭಾರತದ ಮಟ್ಟಿಗೆ ಹೀಗೆ ಬದುಕಿದಂತೆಯೇ ಬರೆದ ಲೇಖಕಿಯರು ತುಂಬಾ ವಿರಳ....

June 3, 2013

ಗುಳ್ಳೆ...
ಅವನಜ್ಜ ಹಾರಿಸಿರಬಹುದು
ಮೊಮ್ಮಗ ಹಾರಿಸಬಹುದು
ಅವರಂತೆ ಇವನಿಗೂ ಅದು ಕ್ಷಣಿಕ ಸುಖ...
ಆದರೆ ಸುಖ-ದುಃಖ-
ದ ಅನುಭವಕ್ಕೂ ಸಮಯವಿಲ್ಲ,
ಹುಟ್ಟುತ್ತಲೇ ಯಾರಿಗೂ ಅರ್ಥವಾಗದ
ಸಾವಿನ ಭಯ
ಗುಳ್ಳೆಗೆ!