December 17, 2013

'ಏನು?' ಅಂದರೆ
'ಸಂಸ್ಕಾರ' ಅಂದರು.
'ಯಾಕೆ?' ಅಂದರೆ
'ಧರ್ಮ' ಅಂದರು.
'ಹೇಗೆ?' ಅಂದರೆ
'ಶಾಸ್ತ್ರ'  ಅಂದರು.
'ಎಲ್ಲಿ?' ಅಂದರೆ
'ಹಿಂದುಸ್ಥಾನ' ಅಂದರು.
'ಎಷ್ಟು?' ಅಂದರೆ
'ಕರ್ತವ್ಯ' ಅಂದರು.
'ಯಾರು?' ಅಂದರೆ
'ನಮೋ' ಅಂದರು.
.
.
.
'ಬೇಡ' ಅಂದರೆ
'ರಕ್ಷಣೆ' ಅಂದರು.
'ಸಾಕು' ಅಂದರೆ
'ಜನ್ಮ' ಅಂದರು!!!

December 11, 2013

ಕೊಲ್ಲೋ ಚಳಿಯೊಡನೆ
ಅವಳ ನೆನಪುಗಳ
ಸರ್ಪಬಂಧ,
ಹೋಮ ಮಾಡಬೇಕಂತೆ!!!

December 8, 2013

ಸಾವಿರಾರು ಜನರಿಗಾಗಿ
ಒಂದು ರೈಲು ಓಡುತ್ತದೆ
ಹಳಿ ಸವೆಯುತ್ತದೆ;
ಲಕ್ಷಾಂತರ ಜನರಲ್ಲಿ
ಎಲ್ಲೋ ಒಬ್ಬ ಗಾಂಧಿ
ಒಬ್ಬ ಮಂಡೇಲಾ...
ಹೀಗೆಲ್ಲಾ ಅಂದುಕೊಳ್ಳುವಾಗ
ಜೋರು
ತೂಕಡಿಕೆ!!!

December 7, 2013

ಸೋಪಿನ ವಾಸನೆಯ ದೇಹಕ್ಕೆ
ಉಡಿದಾರ ಜನಿವಾರ
ವಿಭೂತಿ ಕುಂಕುಮ,
ನೀರಿನಂಥ ಮನಸ್ಸಿಗೆ
ಕದ್ದು ನೋಡಿದ ಪೋಲಿ ಸಿನೆಮಾ!!!

************************

ದ್ವೈತ ಬರೆದವರಿಗೂ
ಅದ್ವೈತ ಬರೆದವರಿಗೂ
ಕೊನೆಯಲ್ಲಿ ಸಮ ಪ್ರಮಾಣದ
ಹುಡಿಮಣ್ಣು ಸಿಕ್ಕಿತಂತೆ!!!

December 6, 2013

ನಡುರಾತ್ರಿ ರಸ್ತೆಯಲ್ಲಿ
ನಾವು ನಾಲ್ಕೇ ಮಂದಿ;
ನಾನೆಂಬ ನಾನು
ಇದ್ದರೂ ಇಲ್ಲದಂತಿರುವ ನಾಯಿ
ಮತ್ತು
ಭಿನ್ನ ಆಕಾರದ
ಆದರೆ ಒಂದೇ ಬಣ್ಣದ
ಎರಡು ನೆರಳುಗಳು!

December 1, 2013

ಗಡಿಯಾರದ ಮುಳ್ಳು ತಿರುಗಿದಂತೆಲ್ಲಾ
ಕಾಣೋ ಬಣ್ಣ ಬದಲಾಗುವುದು
ಸಹಜ,
ಕಾಣದ್ದು ಕೂಡ ಬದಲಾಗುವುದು
ವಿಪರ್ಯಾಸ!
ಕರ ಕರ ಅನ್ನುತ್ತಿದ್ದ
ಅಜ್ಜನ ಶ್ರಾದ್ಧದ ದಿನ
ಕರೀ ಕಾಗೆಯನ್ನು
ಹಸಿದ ಹೊಟ್ಟೆಯಿಂದ
'ಬಾ ಬಾ' ಅಂದರು,
ಬಿಸಿ ಬಿಸಿಯಾಗಿತ್ತು ವಡೆ!

ಮರುದಿನ ಪಾಪ
ಹೊಟ್ಟೆ ಹಸಿದು
'ಕಾ ಕಾ' ಎಂದ ಕಾಗೆಗೆ
ಕಲ್ಲು ಹೊಡೆದರು,
ಖಾಲಿಯಾಗಿತ್ತು ವಡೆ!!!