June 11, 2014

ನಿನ್ನ
ಹುಡುಕ ಹೊರಟಾಗ
ಅವಳು ಕಂಡು
ಕೆಲಸ ಕೆಟ್ಟಿತು!

(ಶೀರ್ಷಿಕೆ : ದೇವರಿಗೆ!!!)
ಅವನು ಕಾಣದಿರುವುದು
ನನ್ನದೇ ದೌರ್ಬಲ್ಯ
ಅಂದುಕೊಂಡರೂ
'ಸರ್ವಶಕ್ತ'ನೆನಿಸಿದವನನ್ನು
ಅನುಮಾನಿಸುವಷ್ಟು
ಶಕ್ತಿ ಉಳಿದಿದೆ!

(ಪ್ರೇರಣೆ : 'ಪ್ರವಾಹಣ',ವೋಲ್ಗಾ-ಗಂಗಾ)
ಭಕ್ತಿಗೆ ಕಾರಣವಾದವನು
ಭಯಕ್ಕೂ ಕಾರಣವಾಗಿಬಿಡುತ್ತಾನೆ
ಹೂ ಕೊಯ್ಯಿಸಿ ಮುಡಿದವನು
ಕಲ್ಲನ್ನೂ ಹೊಡೆಸಿಬಿಡುತ್ತಾನೆ
ಹುಟ್ಟಿಸಿ ಹುಲ್ಲು ಮೇಯಿಸುವವನು
ಬಂದೂಕನ್ನೂ ಕೈಗೆ ಕೊಟ್ಟುಬಿಡುತ್ತಾನೆ!
ಇಲ್ಲ,
ಇದೆಲ್ಲ ಅವನ ಇಚ್ಛಾನುಸಾರ
ನಡೆದಿರಲಿಕ್ಕಿಲ್ಲ...



ಆ ವಯಸ್ಸಿನಲ್ಲಿ ಹಾಗೆ ಮಾಡಿದ್ದು ತಪ್ಪೋ ಸರಿಯೋ ಹೇಳೋದು ಕಷ್ಟ..ಆದರೆ ಅದನ್ನು ಬರೆದುಕೊಳ್ಳೋ ಅವಶ್ಯಕತೆ ಇರಲಿಲ್ಲವೇನೋ...ಇನ್ನು ಅದನ್ನು Quote ಮಾಡೋದು,ಮಾಧ್ಯಮ ಪ್ರಚಾರ ಕೊಟ್ಟು ದೊಡ್ಡ ಸುದ್ದಿಯಾಗಿಸೋದು,ಯಾವಾಗಲೋ ಆಗಿದ್ದನ್ನು,ಬರೆದಿದ್ದನ್ನು ಈಗ ಚರ್ಚಿಸೋದು...ಇದು ದೊಡ್ಡ ದುರಂತ...

**********************************************************************************************************

".......ಮಾಡಿದ್ದಿದೆ" ಎಂಬ ಸಾಲು ಎಲ್ಲರ ಗಮನ ಸೆಳೆದು,ಆಕ್ರೋಶಕ್ಕೆ ಕಾರಣವಾಗಿ ವಿವಾದವಾಗಿಬಿಡುತ್ತದೆ. ಆದರೆ ಅದಕ್ಕಂಟಿಕೊಂಡೇ ಇರುವ ಸಾಲು ಯಾರ ಗಮನಕ್ಕೂ ಬರೋದಿಲ್ಲ(?????)
"ಭಯದಿಂದ ನಿದ್ದೆಗೆಟ್ಟ ಆ ದಿನದ ರಾತ್ರಿಗಳು ನೆನಪಾಗುತ್ತವೆ"
ಈ ಸಾಲನ್ನೂ ಸೇರಿಸಿ 'ಓದಿಕೊಂಡಿದ್ದರೆ' ಕನಿಷ್ಟ ಪಕ್ಷ ವಿವಾದದ ಪ್ರಖರತೆ ಕಡಿಮೆಯಿರುತ್ತಿತ್ತೇನೊ!!!
ವಿಷಯ ಇಷ್ಟೇ...ನಮಗೆ ಬೇಕಾದದ್ದು ವಿವಾದ,ಅದಕ್ಕಾಗಿ ನಾವು 'ಏನನ್ನು' ಬೇಕಾದರೂ ಕೆದಕಲು ತಯಾರ್!!!

URA ಅನುವಾದಿಸಿದ ಬ್ರೆಕ್ಟನ ಸಾಲು ನೆನಪಾಗುತ್ತಿದೆ...
'ನಿನ್ನ ಗೋರಿ ಮೇಲೆ
ಸತ್ತ ತಾರೀಖು
ಸತ್ತವನ ಹೆಸರು
ಅದಕ್ಕೊಂದು ಕಲ್ಲು
ಏನೂ ಬೇಡ
ಸತ್ತವನನ್ನೇ ಯಾರೆಂದು
ಪತ್ತೆ ಮಾಡಿ ಪೀಡಿಸಿಯಾರು;ಜೋಕೆ
ಇರಲೇ ಇಲ್ಲ ಎನ್ನುವ ಹಾಗೆ ಇದ್ದು ಬಿಡು.'


ನಾಲ್ಕಕ್ಷರ ಬರೆದು
ನಾಲ್ಕು ಮಾತಾಡಿದ
ಮರುಕ್ಷಣವೇ ಅವನನ್ನು
'ಆ ಪಂಥ'ಕ್ಕೆ
'ಈ ವಾದ'ಕ್ಕೆ
ಅಂಟಿಸುವವರ ಹಿರಿತನಕ್ಕೆ
ಈ ಕಿರಿಯನ ಧಿಕ್ಕಾರ!
(ಹುಂಬತನ/ಎಳಸುತನ ಅಂದುಕೊಳ್ಳಿ ಬೇಕಾದರೆ!)
ಕೇಸರಿ,ಹಸಿರು
ಸಂಸ್ಕೃತಿ,ಧರ್ಮ
ಮನುಷ್ಯನ ಸೃಷ್ಟಿಗಳು,
ಅವುಗಳನ್ನು ಆರಾಧಿಸುವುದೂ
ಮನುಷ್ಯ ಮಾತ್ರ!!!

June 7, 2014

ವರ್ಷಕ್ಕೊಮ್ಮೆ
'ವಿಶ್ವ ಪರಿಸರದಿನ',
ಈ ವರ್ಷದ್ದು ಈಗ
ಮುಗೀತು!
ಮರಳಿ ಕಾಡಿಗೆ ಹೋಗಿ
ಹಸಿ ಮಾಂಸ ತಿನ್ನೋಕಂತೂ
ಸಾಧ್ಯವಿಲ್ಲ;
ಆದರೆ
ಮನಸ್ಸು ಮಾಡಿದರೆ
ಅಜ್ಜ ಹಿಡಿದ
ನೇಗಿಲು ಹಿಡೀಬಹುದೇನೋ?!
ಅಥವಾ ಕನಿಷ್ಟ ಪಕ್ಷ
ಆ ರೀತಿ ಯೋಚಿಸಬಹುದೇನೋ?
ಕೃತಿ-ಕಾರ್ಯಕ್ಕಿಂತ ಮೊದಲು ಹುಟ್ಟಿದ್ದು
ಆಲೋಚನೆಯಂತೆ...

(ಕಾರಂತಜ್ಜನನ್ನು ಮತ್ತೊಮ್ಮೆ ಓದಬೇಕು...)
ಪ್ರಶ್ನಾತೀತವಾಗುವುದಕ್ಕಿಂತ
ಹೆಚ್ಚು ಅಪಾಯಕಾರಿಯಾದ್ದನ್ನು
ಇನ್ನೂ ಕಂಡಿಲ್ಲ!

**************************

ಬಿಗಿಯಾದ ನೆಲದಲ್ಲಿ
ಅಚ್ಚುಕಟ್ಟಾದ ಮನದಲ್ಲಿ
ಬೀಜ ಮೊಳೆಯೋದಿಲ್ಲ...

**************************

ವಾಸ್ತವದ ವಿಕಾರವನ್ನು
ರಮ್ಯತೆಯಿಂದ ಅಡಗಿಸಬಹುದು.
ಆದರೆ
ರುಚಿ???

**************************

ಕಲಿಕೆಯ ಶಿಖರ ಹತ್ತಿದಂತೆಲ್ಲ
ಜ್ನಾನಿಗಳಾಗುತ್ತಾರಂತೆ,
ಆದರೆ
ನಮಗೆ ಅದಕ್ಕೆ ಮೊದಲೇ
ನೌಕರಿ ಸಿಕ್ಕಿಬಿಟ್ಟಿರುತ್ತದೆ!!!
ಆ ವಾದ ಈ ವಾದಗಳ
ನೇಲ್ ಪಾಲಿಶ್ ವೀಕೆಂಡುಗಳ
ಜೀಡೀಪಿ ಏಬೀಸೀಡೀಗಳ
ಸತ್ಸಂಗ ಪ್ರಾಣಾಯಾಮಗಳ
ಪುಸ್ತಕಗಟ್ಟಲೇ ಕವಿತೆಗಳ
ಪರಿಚಯವೇ ಇಲ್ಲದ
ಬೀಜವೊಂದು
ಬ್ಯಾಂಕ್ ಸಾಲದ ಭಯದಲ್ಲಿ
ಕರೀ ಮೋಡದ ತಂಪಲ್ಲಿ
ಯಾರಿಗೂ ತಿಳಿಯದಂತೆ
ಬೆಳಕು ಹರಿವ ಮುನ್ನವೇ
ಉಸಿರಾಡಿತು...
'ನೌಕರಿ' 
'ಸಂಬಳ' 
'ಖರ್ಚು' 
'ಉಳಿತಾಯ' 
ಇವಿಷ್ಟು ಬಿಟ್ಟು ಉಳಿದದ್ದು 
ಬದುಕು!