May 27, 2014

ದೇಗುಲಗಳ ಸೌಮ್ಯ ಪ್ರತಿಮೆ
ಕವಿತೆಗಳ ಪ್ರಭಾವಶಾಲೀ ಪ್ರತಿಮೆ
ಆದರ್ಶಗಳ ಜೀವಂತ ಪ್ರತಿಮೆ
ಬುದ್ಧ
'ಪ್ರತಿಮೆ'.

ಆ ಕಾಲದಿಂದ ಇವತ್ತಿನವರೆಗೂ ಹುಚ್ಚು 'ಅಭಿವೃದ್ಧಿ' ನಡೆದು ಬಂದಿದ್ದು ಬಹುಷಃ ಹೀಗೆಯೇ...

"...ಈ ತಾಮ್ರ,ಈ ಹೊಲಗಳು-ಇವನ್ನು ಕಂಡರೆ ಸಾಕು.ನನ್ನೆದೆಯಲ್ಲಿ ಬೆಂಕಿಯೇ ಏಳುವುದು...
...ಬೇಗನೆ ಕೆಲಸ ಮಾಡಬೇಕೆಂಬ ಈ ಅವಸರವೇ ನಮ್ಮ ಕುಲಗೆಡಿಸಿತು...
...ಹೊಲವೆಂದರೇನು? ಜನರನ್ನು ಒಂದು ಕಡೆ ಕಟ್ಟಿಹಾಕುವ ಗೂಟವೇ ಅದು! ...ಮನುಷ್ಯ ಈ ತೆರನಾಗಿ,ಒಂದೇ ಕಡೆ ಕಟ್ಟಿಹಾಕಿದಂತೆ ನೆಲೆಸಿರಲು ಹುಟ್ಟಿದುದಲ್ಲ..."

...ಪುರುಹೂತನಿಗೆ ಮಾದ್ರ ವೃದ್ಧನ ಮಾತುಗಳು ಮನೋರಂಜಕವಾಗಿ ಕಂಡರೂ ಕೈಗೊಂಡ ಕೈದುಗಳನ್ನು ತ್ಯಜಿಸಿ ಈ ಜನಮಂಡಲದಲ್ಲಿ ಮಾನವ ಹಾಗೂ ಪಶು ಶತ್ರುಗಳ ನಡುವೆ ಬದುಕುವುದೇ ಅಸಾಧ್ಯವೆಂದು ತಿಳಿಯುತ್ತಿದ್ದ ಆತ...

...ಐವತ್ತು ವರ್ಷಗಳ ಮತ್ತಾದರೂ ವೃದ್ದನ ಮಾತು ಸತ್ಯವಾಯಿತು...

- ವೋಲ್ಗಾ ಗಂಗಾ
(ಪುರುಹೂತ,ಕಾಲ-ಕ್ರಿಸ್ತಪೂರ್ವ 2500)

May 22, 2014

ಇಲ್ಲಿ ಕತ್ತಲು
ಅಲ್ಲಿ ಕೂಡ,
ಬೆಳಕಿನ ಭ್ರೂಣಗಳು
ಗುಳೆ ಹೊರಟಿವೆ
ಅನಂತದತ್ತ,
ಆಯ್ಕೆಗಳಿಲ್ಲದೆ...

*********************

ಕತ್ತಲಿಗೆ ಕಣ್ಣಿಲ್ಲ,
ಆದರೆ
ಮೈತುಂಬಾ ಕಿವಿಗಳು!

*********************

ಅನಕ್ಷರಸ್ಥ ಕತ್ತಲ ಒಡಲಲ್ಲಿ
ಅಸಂಖ್ಯಾತ ಅಕ್ಷರಗಳು,
ಸಹಜವೆ...

May 20, 2014

ಇವರದ್ದು ಅತಿಯಾಯಿತು…

‘ಹಿಂದೂ ಮಹಾಸಾಗರಕ್ಕೆ ನೂಕಿಬಿಡಿ,ಈಜಿಕೊಂಡು ಕರಾಚಿ ತಲುಪಲಿ…’
’ಗಂಟು ಮೂಟೆ ಸಹಿತ ವಿಮಾನದಿಂದ ಕೆಳಗೆ ನೂಕಿ…’
’ಗುಜರಾತಿನಿಂದ ರೈಲಿನಲ್ಲಿ ಪಾರ್ಸೆಲ್ ಮಾಡಿ ಕಳಿಸಿ…’
ಹೀಗೇ ಇನ್ನೂ ಏನೇನೋ…
ಮೊನ್ನೆಯಿಂದ ಅನಂತಮೂರ್ತಿಯವರ ವಿಷಯದಲ್ಲಿ ಕೇಳಿಬರುತ್ತಿರುವ ವಿಕೃತ ಹೇಳಿಕೆಗಳಿಗೆ ಇತಿಮಿತಿಗಳೇ ಇಲ್ಲದಂತಾಗಿದೆ. ಮೊದಮೊದಲು ಇವೆಲ್ಲ ಅಪ್ರಬುದ್ಧ ಮನಸ್ಸುಗಳ silly ಪ್ರತಿಕ್ರಿಯೆಗಳಾಗಿ,ಗೆದ್ದ ಸಂಭ್ರಮದಲ್ಲಿ ಹೊರಬಂದ ಆವೇಶದ ಮಾತುಗಳಾಗಿ,ಸ್ವಲ್ಪ ಸಮಯದ ಬಳಿಕ ಆರಿಹೊಗುವ ತಾತ್ಕಾಲಿಕ ಕಿಡಿಗಳಾಗಿ ಕಂಡುಬಂದಿದ್ದವು. ಆದರೆ ದಿನ ಕಳೆದಂತೆ ಇಂಥ ಹೇಳಿಕೆಗಳು ಹೆಚ್ಚಾಗುತ್ತಿವೆ. ಚುನಾವಣೆಗಿಂತ ಮೊದಲು ಬಿಜೆಪಿ ಪರ ಪ್ರಚಾರದಲ್ಲಿ ತೊಡಗಿದ್ದ ಹಲವರಿಗೆ ಈಗ ಬರೀ ಇದೇ ಕೆಲಸವಾಗಿಬಿಟ್ಟಿದೆ.
‘…ದೇಶ ಬಿಟ್ಟು ಹೋಗುತ್ತೇನೆ’ ಎಂಬ ಹೇಳಿಕೆಯನ್ನು ಮೊದಲ ಬಾರಿಗೆ ಕೇಳಿದಾಗ ನನಗೂ ಅದರಲ್ಲಿ ನಾಟಕೀಯತೆ ಕಂಡುಬಂದಿತ್ತು. (ಆದರೆ ಅದಾಗಲೇ ಆ ಹೇಳಿಕೆ ತಿರುಚಲ್ಪಟ್ಟಿತ್ತು ಎಂಬುದು ತಡವಾಗಿ ತಿಳಿದುಬಂದ ವಿಚಾರ) ಆ ನಂತರ ನಂದನ್ ನೀಲೇಕಣಿಯಂಥ ಕಾರ್ಪೋರೇಟ್ ದೈತ್ಯನಿಗೆ ಬಹಿರಂಗವಾಗಿ ಬೆಂಬಲ ಸೂಚಿಸಿದ್ದೂ ಇಷ್ಟವಾಗಿರಲಿಲ್ಲ. ಆದರೆ ನನ್ನ ಮಟ್ಟಿಗೆ ಇವೆಲ್ಲ ನಿರ್ಲಕ್ಷಿಸಬಲ್ಲ ವಿಚಾರಗಳಗಿದ್ದವು. ಏಕೆಂದರೆ ನಾವ್ಯಾವತ್ತೂ ಅನಂತಮೂರ್ತಿಯವರನ್ನು ಅಥವಾ ಇನ್ಯಾವುದೇ ಸಾಹಿತಿಯನ್ನು ನಮ್ಮ ಜೀವನದ ಪರಮೋಚ್ಛ ಆದರ್ಶವೆಂದು ತಿಳಿದುಕೊಂಡವರಲ್ಲ,ಹಾಗೆ ತಿಳಿದುಕೊಳ್ಳುವುದು ತಪ್ಪಾಗುತ್ತದೆ ಕೂಡ. ನಮಗಿಷ್ಟವಾಗದ ಅವರ ವಿಚಾರ,ನಡೆಗಳನ್ನು ಪ್ರಶ್ನಿಸುವ,ವಿರೋಧಿಸುವ ಹಕ್ಕು ಕೂಡ ನಮಗಿದೆ. ಆದರೆ ವಿರೋಧ ವಿಮರ್ಶಾತ್ಮಕವಾಗಿರಬೇಕೇ ಹೊರತು ವಿಕೃತವಾಗಿ ಅಲ್ಲ.
‘ಮೋದಿಯನ್ನು ತುಂಡು ತುಂಡು ಮಾಡುತ್ತೇನೆ’ ಎಂದವನಿಗೂ,’ಮೋದಿ ವಿರೋಧಿಗಳೆಲ್ಲರೂ ದೇಶ ಬಿಡಲಿ’ ಎಂದವನಿಗೂ,’ರೈಲಿನಲ್ಲಿ ಪಾರ್ಸೆಲ್ ಮಾಡಿ’,’ಸಮುದ್ರಕ್ಕೆ ನೂಕಿ’,’ವಿಮಾನದಿಂದ ನೂಕಿ’ ಎನ್ನುತ್ತಿರುವವರಿಗೂ ಯಾವುದೇ ವ್ಯತ್ಯಾಸ ಕಾಣುತ್ತಿಲ್ಲ. ಭಯೋತ್ಪಾದಕತೆಯ ವಿರುದ್ಧ ಭಾಷಣ ಮಾಡುವವರು,ಮಂತ್ರಮುಗ್ಧರಾಗಿ ಕೇಳುವವರು ಅನಂತಮೂರ್ತಿಯವರ ವಿಷಯದಲ್ಲಿ ಮಾಡುತ್ತಿರುವುದೇನು? ಕಾಲ ಕಾಲಕ್ಕೆ ಡಯಾಲಿಸಿಸ್ ಮಾಡಿಸಿಕೊಳ್ಳುತ್ತ,ಜೀವನ ಪ್ರೀತಿಯನ್ನೇ ಉಸಿರಾಡುತ್ತಿರುವ ವೃದ್ಧ ಜೀವವೊಂದಕ್ಕೆ ಸುಳ್ಳು ಕರೆ ಮಾಡಿ ‘ನಿಮಗಾಗಿ ಟಿಕೆಟ್ ಬುಕ್ ಮಾಡಿದ್ದೇವೆ’ ಎನ್ನುವುದನ್ನು ಭಯೋತ್ಪಾದಕತೆ ಅನ್ನದೆ ಮತ್ತೇನೆಂದು ಕರೆಯಬೇಕು? ಇಷ್ಟಕ್ಕೂ ಅನಂತಮೂರ್ತಿಯವರು ಯಾರಮೇಲಾದರೂ ಹಲ್ಲೆ ಮಾಡಿದ್ದಾರಾ ಅಥವಾ ಯಾರದ್ದಾದರೂ ತಲೆ ತೆಗೆಯುತ್ತೇನೆ ಅಂದಿದ್ದಾರಾ???
ಸಾಹಿತ್ಯ,ಸಾಹಿತಿಗಳು ನಿಮ್ಮ ಧಾರ್ಮಿಕ ಭಾವನೆಗಳಿಗೆ,ನಂಬಿಕೆಗಳಿಗೆ ಧಕ್ಕೆ ತಂದಿದ್ದರೆ ಅದನ್ನು ಅಕ್ಷರಗಳ ಮೂಲಕವೇ ಹೊರಹಾಕಿ ಅಥವಾ ಸಾಹಿತ್ಯದ ವಿಷಯದಲ್ಲಿ ನೀವೂ ನಾಸ್ತಿಕರಾಗಿ. ಇವೆರಡನ್ನೂ ಮಾಡಲು ಸಾಧ್ಯವಿಲ್ಲವಾಗದೆ ಹಿಂಸಾತ್ಮಕ ಮಾರ್ಗ ಅನುಸರಿಸುವುದು ದೌರ್ಬಲ್ಯವೆನಿಸುತ್ತದೆ. ತಾಳ್ಮೆಯೇ ಇಲ್ಲದವನ ‘ಧರ್ಮ’ದ ಬಗ್ಗೆಯೂ ಪ್ರಶ್ನೆಗಳು ಉದ್ಭವವಾಗುತ್ತವೆ…
ಈ ಸಂದರ್ಭದಲ್ಲೇ ಮತ್ತೆ ಮತ್ತೆ ಕೇಳಿಬಂದ ಮಾತು ‘ಸಾಹಿತಿಯೊಬ್ಬನಿಗೆ ಇದೆಲ್ಲ ಬೇಕಿತ್ತಾ? ಮಾಡಿದ ‘ತಪ್ಪಿಗೆ’ ಸರಿಯಾದ ಶಾಸ್ತಿ ಅನುಭವಿಸಲಿ’! ಇದೇನು ಕನಿಕರವೋ? ಖಾಳಜಿಯೋ? ಸಿಟ್ಟೋ? ಅಪಹಾಸ್ಯವೋ? ಅರ್ಥವಾಗುತ್ತಿಲ್ಲ. ಸಾಹಿತ್ಯವನ್ನು ನಿಜಕ್ಕೂ ಇಷ್ಟಪಡುವವನು ಇರಬೇಕಾದ್ದು ಮಾನವೀಯತೆಯ ಪರವಾಗಿ. ಇಲ್ಲಿ ವ್ಯಕ್ತಿಗಿಂತ ಮೌಲ್ಯ ಮುಖ್ಯವಾಗುತ್ತದೆ. ಅದು ಅನಂತಮೂರ್ತಿಯೇ ಆಗಿರಲಿ ಅಥವಾ ಮೋದಿಯೇ ಆಗಿರಲಿ. No one has got rights speak about someone’s death. ಸಾಹಿತಿಯೇನು ದೇವಲೋಕದಿಂದ ಉದುರಿ ಬಿದ್ದವನಲ್ಲ. ಎಲ್ಲರಂತೆ ಅವನೂ ಒಬ್ಬ ಮನುಷ್ಯ ಅಷ್ಟೆ. ಅವನಿಗೂ ಹೆಂಡತಿ ಮಕ್ಕಳಿದ್ದಾರೆ,ಅವನೂ ಎಲ್ಲರಂತೆಯೇ ಊಟ ತಿಂಡಿ ಮಾಡುತ್ತಾನೆ. ಆತ ರಾಜಕೀಯ ಪ್ರವೇಶಿಸಬಾರದು,ರಾಜಕೀಯ ಸನ್ನಿವೇಷಗಳಿಗೆ ಪ್ರತಿಕ್ರಿಯೆ ನೀಡಬಾರದು,ನಾಲ್ಕು ಗೋಡೆ ಮಧ್ಯೆ,ಪುಸ್ತಕದ ಪುಟಗಳ ಮಧ್ಯೆ ಕಥೆ ಕವನಕ್ಕೆ ಸೀಮಿತವಾಗಿರಬೇಕು ಎಂದು ಸಂವಿಧಾನದ ಅಥವಾ ಧರ್ಮಗ್ರಂಥದ ಯಾವ ಭಾಗದಲ್ಲಿ ಬರೆದುಕೊಂಡಿದೆ ಅಥವಾ ಆತನ ಈ ಕಾರ್ಯ ಯಾವ ರೀತಿಯಿಂದ ಮನುಷ್ಯ ಸಹಜ ಗುಣಗಳಿಗೆ ವಿರುಧ್ಧವಾಗಿದೆ? ಇಷ್ಟಕ್ಕೂ ಯಾರೂ ಬುಧ್ಧಿಜೀವಿ,ಸಾಹಿತಿ ಎಂದು ತನ್ನನ್ನು ತಾನೇ ಕರೆದುಕೊಳ್ಳೋದಿಲ್ಲ. ಅದೆಲ್ಲ ಅವರ ಕೃತಿ,ಕಾರ್ಯವನ್ನು ನೋಡಿ ಇತರರು ಆರೋಪಿಸುವುದು ಅಷ್ಟೇ. ರಸ್ತೆ ಅಗಲೀಕರಣಕ್ಕೆಂದು ಮರಗಳನ್ನು ನೆಲಸಮ ಮಾಡುವಾಗ,ಯಾವುದೋ ವಿದೇಶೀ ಕಂಪನಿ ಸ್ಥಾಪನೆಗೆ,ವಿದ್ಯುತ್ ಸ್ಠಾವರಕ್ಕೆಂದು ಕೃಷಿ ಭೂಮಿಯನ್ನು,ಅರಣ್ಯ ಪ್ರದೇಶವನ್ನು ಬಳಸಿಕೊಳ್ಳುವಾಗ,ಗಣಿಗಾರಿಕೆ ಮಿತಿ ಮೀರಿದಾಗ,ಭಾಷಾ ಮಾಧ್ಯಮದ ಬಗ್ಗೆ ಹೋರಾಟಗಳು ನಡೆಯುವಾಗ ಮಡಿವಂತರೆಲ್ಲರೂ ಜಾಣ ಮೌನ ತಳೆದಾಗ ಮಾತಾಡಿದವರೇ ಈ ಸಾಹಿತಿಗಳು,ಬುದ್ಧಿಜೀವಿಗಳು ಎಂಬ ವಿಚಾರ ಎಷ್ಟೋ ಜನರಿಗೆ ಮರೆತೇ ಹೋದಂತಿದೆ. ‘ಈ ಮೊದಲು ಅವರ ಬಗ್ಗೆ ಗೌರವವಿತ್ತು ಆದರೆ ಅವರ ರಾಜಕೀಯದಿಂದಾಗಿ ಇದ್ದ ಗೌರವವೂ ಹೋಯಿತು’ ಅನ್ನುವವರ ಬಳಿ ಅನಂತಮೂರ್ತಿಯವರು ತನ್ನನ್ನು ಗೌರವಿಸಿ ಎಂದು ಯಾವತ್ತೂ ಕೇಳಿಕೊಂಡಿರಲಿಲ್ಲ ಮತ್ತು ಅವರು ಇಂಥ ವಿಕೃತಿಯನ್ನೂ ಅಪೇಕ್ಷಿಸಿರಲಿಲ್ಲ. ಬರೀ ‘ಮಾಮರ,ಕೋಗಿಲೆ’ಗೆ ಸೀಮಿತವಾಗುವವರು ಮಾತ್ರ ಸಾಹಿತಿಗಳು ಎನ್ನುವುದಾದರೆ ಕ್ಷಮಿಸಿ… ದೇವನೂರು,ಲಂಕೇಶ್,ಕಾರಂತರು,ಅನಂತಮೂರ್ತಿ,ತೇಜಸ್ವಿ ಇವರೆಲ್ಲ ಯಾವತ್ತೂ ಸಾಹಿತಿಗಳೇ ಆಗಿರಲಿಲ್ಲ! ಅವರ ಹೋರಾಟ,ನಿಷ್ಠುರತೆ,ಮಾನವೀಯತೆ,ನೇರ ನುಡಿಯನ್ನು ಹೊರತುಪಡಿಸಿ ಮತ್ಯಾವ ಕಾರಣಕ್ಕಾಗಿ ನೀವು ಅವರನ್ನು ‘ಈ ಮೊದಲು’ ಗೌರವಿಸುತ್ತಿದ್ದಿರೋ ಅರ್ಥವಾಗುವುದಿಲ್ಲ! ನಿಮಗೆ ಇಷ್ಟವಾಗುತ್ತಾರೋ ಇಲ್ಲವೋ ಆದರೆ ಅವರು ಯಾವತ್ತೂ ಇದ್ದಿದ್ದೇ ಹಾಗೆ…
ಸಾಹಿತ್ಯವನ್ನು ಓದಿಕೊಂಡವರಿಗೆ,ಮುಂದೆಯೂ ಓದುವವರಿಗೆ ಇದೆಲ್ಲ ಈ ಕ್ಷಣಕ್ಕೆ ಅಲ್ಲದಿದ್ದರೂ ಮುಂದೊಂದು ದಿನ ಅರ್ಥವಾಗಬಹುದು,ಆದರೆ ‘ಕುರಿತೋದದ ಪಂಡಿತ’ರಿಗೆ,ತಲೆ ತೆಗೆಯುವ ‘ಕ್ರಾಂತಿಕಾರಿ’ಗಳಿಗೆ ಇಂಥ ಸೂಕ್ಷ್ಮಗಳನ್ನು ಅರ್ಥ ಮಾಡಿಸುವುದು ಯಾರು? ಮತ್ತು ಹೇಗೆ? ಕಡಲು ತನ್ನ ಪಾಡಿಗೆ ತಾನು ಭೋರ್ಗರೆದುಕೊಂಡರೆ ಅದರಿಂದ ಯಾರಿಗೂ ಸಮಸ್ಯೆಯಿಲ್ಲ,ಆದರೆ ಸುನಾಮಿಯನ್ನು ಮತ್ತೊಮ್ಮೆ ಕಲ್ಪಿಸಿಕೊಳ್ಳಲು ಸಾಧ್ಯವಿಲ್ಲ…ಇದು ಸಧ್ಯದ ಆತಂಕ…
ಇವತ್ತು ಆರತಿ ಮಾಡಿಸಿಕೊಂಡ ಗಂಗೆ
ನಾಳೆ ಮತ್ತೆ ಹೆಣಗಳನ್ನು ಹೊರುತ್ತಾಳೆ
ಕಾರ್ಖಾನೆಗಳ ಕೊಳಕು ತೊಳೆಯುತ್ತಾಳೆ
ದಿನ ಕಳೆದಂತೆ ಹೆಚ್ಚು ಮಲಿನವಾಗುತ್ತಾಳೆ
ಸಹಜತೆಯಿಂದ ದೂರವಾಗುತ್ತಾಳೆ...
ಎಂದಿನಂತೆ...

ಆ ತಾಳ್ಮೆಗೆ ಶರಣು...

(ನಮ್ಮ 
ಅಘನಾಶಿನಿ,ಶರಾವತಿಯರೇ
ಪುಣ್ಯವಂತೆಯರು...)

May 14, 2014

ಒಬ್ಬ ಕಟ್ಟಿದನೆಂದು ಇಬ್ಬರು
ಇಬ್ಬರ ಕಂಡು ಹಲವರು
ಕಟ್ಟೇ ಕಟ್ಟಿದರು...
ಶೌಚಕ್ಕೂ ಜಾಗವಿಲ್ಲ,
ದೇವಸ್ಥಾನಗಳ ಊರಲ್ಲೀಗ
ಗಬ್ಬುನಾತ!
ಈಗಲೂ ಕವನದಲ್ಲಿ
ಕೋಗಿಲೆ ಕೂಗಿದರೆ
ಹಸಿರು ಕಂಗೊಳಿಸಿದರೆ
ಪ್ರೀತಿ ಉಕ್ಕಿದರೆ
ಜಾತ್ಯತೀತತೆ ತಂಪೆರೆದರೆ
ಸಿರಿಗನ್ನಡ ಗೆದ್ದಂತೆ ಕಂಡುಬಂದರೆ
ದಯವಿಟ್ಟು ತಿಳಿಸಿ,
ಬೆಂಕಿಪೊಟ್ಟಣ
ಕಿಸೆಯಲ್ಲೇ ಇದೆ!
ಕನ್ನಡಿಗೆ
ಫ್ರೇಮು ಕಟ್ಟುವವನನ್ನು
ಭೇಟಿಯಾಗಬೇಕಿತ್ತು...
ಕಲ್ಪನೆ-ವಾಸ್ತವ
ಎರಡನ್ನೂ ಸುಳ್ಳಾಗಿಸಬಲ್ಲವನು
ಅವನು...!
ಕಾವ್ಯ
ಬರೀ ಕಲೆಯಲ್ಲ,
ತೆವಲು ಕೂಡ
ಅಂತ
ಅನು-
ಮಾನ!
ಗುರಿ ಯಾವತ್ತೂ
ಹಿಂದಿರುತ್ತದೆ,
ಮುಂದೆ ಕಂಡಿದ್ದು
ಬಿಂಬ ಮಾತ್ರ...