February 27, 2014

ಕಾಗದ ಅಂದರೆ
ಅಕ್ಷರ
ಕವಿತೆ
ಜ್ಞಾನ ಮಣ್ಣು ಮಸಿ
ಅಂದುಕೊಂಡಿದ್ದೆ,
ವಾಸನೆ-
ಯೆಂದು ಗೊತ್ತಾಗಿದ್ದು
ದಾಂಡೇಲಿಯಲ್ಲಿ!
ಕವನ 'ಹೀಗಿರಬೇಕು'
ಅಂದವನಲ್ಲಿ
ಫ್ಯಾ‌ಸಿಸ್ಟ್ ಕಂಡ!
ಪೇಟೇಲಿ ಜೀವದ ಬೆಲೆ
ಧಿಡೀರ್ ಕುಸಿಯಲಿದೆ
ಮಾರೋದಿದ್ದರೆ
ಬೇಗ ಮಾರಿಬಿಡಿ!

************

ಉಚ್ಚೆಯಿಂದ ಓಡುವ
ಕಾರು ಇದೆಯಂತೆ,
ಬಾವೀಲಿ
ಪೆಟ್ರೋಲು ಕಾಣ್ತದಾ ನೋಡಿ!
ಪೂರ್ತಿ ಒಣಗೇಬಿಟ್ಟಿತು ಅನ್ನುವಾಗ
ಕವಿಗೋಷ್ಠಿಯ ಬಿಸ್ಲರಿ ಬಾಟಲಲ್ಲಿ
ಯಾರೋ ಉಳಿಸಿದ ನೀರು ಕಂಡಿತು!

February 16, 2014

ಹಳಿಯಾಳದಿಂದ...

ಮರಳು ತಂಬುಳಿ ಲಿಟರೇಚರ್ ಬಿಟ್ಟು
ಕೊನೇ ಕಿಟಕಿ ಸೀಟಲ್ಲಿ
ಸಿಗ್ನಲ್ಲಿಲ್ಲದೆ ಘಟ್ಟ ಹತ್ತಿ
ಹಾರಿ ಜಾರಿ ನಡುಕ ಮೀರಿ
ನಾಕು ರುಪಾಯಿಯ ಹದಿನಾಕು ಪುಟದಲ್ಲಿ
ಬುದ್ಧಿ ಬೆಂಕಿ ಬೂದಿ ಮಾಡಿ
ಮಣ್ಣು ತಿಂದು
ಕ್ರಿಮಿನಾಶಕ ಕುಡಿದು
ಅಗೆದಗೆದು ಪುಚುಕ್ಕನೆ ಉಗುಳಿ
ಕಥೆ ಕೇಳದೆ ಸಗಣಿ ತೆಗೆದು
ನಂಜೇರದಂತೆ ಕುಂಡೆ ತೊಳೆದು
ಗೊಬ್ಬರ ಸಬ್ಸಿಡಿ ಇಂಕು ತಲೆಗೊರೆಸಿ
ಅಕ್ಷರವೆಲ್ಲ ಫಲವತ್ತಾಗಿ
ಅಮ್ಮ ತೊಳೆದು ಹಾಸಿಟ್ಟ
ಬಣ್ಣದ ಹಸೆ ಮೇಲೆ
ಆಕಳಿಕೆಯೇ ಬರಲಿಲ್ಲ,
ಅಸಂಭವಾಮಿ ಸಿಟಿ ಯುಗೇ
ಪಗಾರಾಗಲಿ ಡ್ರೈವರನಿಗೆ!!!

February 14, 2014

ಪ್ರೇಮಿಗಳ ದಿನ

ಜೈಕಾರ ಧಿಕ್ಕಾರ
ಮೋದಿ ರಾಹುಲ್ ಕೇಜ್ರಿ
ಧರ್ಮಗ್ರಂಥ ಅತ್ಯಾಚಾರ
ಬ್ರಿಗೇಡು ಡೀಎನ್ನೇ
ಫ಼ಾರಿನ್ ಟೂರು ಡಬ್ಬಿಂಗು

ನ್ಯೂಸ್ ಚಾನೆಲ್ ಭಾಷಾ ಮಾಧ್ಯಮ
ಸೈಕಾಲಜಿ ಸ್ವಪ್ನಸ್ಖಲನ
ದೇಶಭಕ್ತಿ ತುಟ್ಟಿಭತ್ಯೆ
ಬುದ್ಧಿಜೀವಿ ಬೆಟ್ಟಿಂಗು
ಪುರವಣಿ ಜಪಾನೀ ತೈಲ
ಬಜೆಟ್ಟು ಹೆಂಡ ರಾಜೀನಾಮೆ
ಒಂದಕ್ಕೆರಡು ಆಫ಼ರ್ ಉಚಿತ
ಆರೋಗ್ಯವಿಮೆ ಮಣಿಪಾಲ್ ಬಸ್ಸು
ಮೊಳಕ್ಕಾರು ಬಲೂನು ಹೂವು
ಪೂರ್ಣವಿರಾಮ ಅರ್ಧವಿರಾಮ
ಗಳ ಮಧ್ಯೆ
ಮೊನ್ನೆ
ಪ್ರೇಮಿಗಳ ದಿನ!

February 11, 2014

ಕುಂವೀ ಹೇಳಿಕೆ ಮತ್ತು ಕೇಸರಿಗಳ ಚಪ್ಪಾಳೆ!

ಸಾಹಿತ್ತಿಕ ವಲಯದಲ್ಲಿ ಒಂದು ಹೊಸ ಅಲೆ ಎದ್ದಿದೆ. ಯಾವಾಗಲೂ ಏಳುತ್ತಿರುತ್ತದೆ,ಆದರೆ ಈ ಬಾರಿ ಸ್ವಲ್ಪ ಜೋರಾಗಿಯೇ ಎದ್ದಿದೆ! ವಿಪರ್ಯಾಸವೆಂದರೆ ಜ್ಞಾನಪೀಠ ಪ್ರಶಸ್ತಿಯ ನೆಪದಲ್ಲಿ ಎದ್ದಿರುವ ಅಲೆಯಲ್ಲಿ ಸನಾತನಿಗಳು ಅಥವಾ ಕೇಸರಿಗಳು (ಚೆಡ್ಡಿಗಳು ಅಂತ ಕರೆದರೆ ಸಂಸ್ಕೃತಿಗೆ ವಿರುದ್ಧವಾಗಬಹುದು!) ಸ್ವದೇಶೀ ಸೋಪಿನಲ್ಲಿ ಸ್ನಾನ ಮಾಡುತ್ತಿದ್ದಾರೆ! ಕೆರೆ ನೀರು ಕೊಳಕಾಗುತ್ತಿದೆ!
ಕುಂವೀ ಆ ಹೇಳಿಕೆ ನೀಡಿದ ತಕ್ಷಣ ಸ್ವತಃ ಅವರ ಬಗ್ಗೆಯೂ ಗೊತ್ತಿಲ್ಲದ ಹಲವರು ತಮ್ಮಷ್ಟಕ್ಕೇ 'ಜೈ' ಅಂದರು! ಕಾರಣ ಹೇಳಿಕೆ ಅನಂತಮೂರ್ತಿಯವರ ವಿರುದ್ಧವಾಗಿತ್ತು. ನನ್ನ ಹಲವು ಮಿತ್ರರು ಕೂಡ 'ಅನಂತಮೂರ್ತಿ ಬಿದ್ದ ನೋಡು!' ಎಂದು ಚಪ್ಪಾಳೆ ತಟ್ಟಿದರು! ಆದ್ದರಿಂದ ನನಗೂ ಪ್ರತಿಕ್ರಯಿಸಲೇಬೇಕಾಯಿತು.
ಒಪ್ಪುತೇನೆ...ಕಾರಂತರು,ಅನಂತಮೂರ್ತಿ,ಲಂಕೇಶ್ ಮತ್ತು ತೇಜಸ್ವಿ ಈ ನಾಲ್ಕು ಜನರ ವಿರುದ್ಢವಾಗಿ ಯಾರು ಏನೇ ಹೇಳಿದರೂ ಸಹಿಸಿಕೊಳ್ಳೋದು ಕಷ್ಟ. ಕನ್ನಡ ಸಾಹಿತ್ಯವನ್ನ ಯಾವತ್ತೂ ಎಚ್ಚರವಾಗಿಡುವವರು ಇವರು. ಹಾಗೆಂದ ಮಾತ್ರಕ್ಕೆ ಉಳಿದವರು ಸಾಹಿತಿಗಳಲ್ಲ ಎಂದಲ್ಲ. ಇವತ್ತಿಗೂ ನನ್ನ ನೆಚ್ಚಿನ ಕವಿ ರಾಮಾನುಜನ್ ಮತ್ತು ನೆಚ್ಚಿನ ಕವನ ವಿ.ಜಿ.ಭಟ್ಟರ 'ಆತ್ಮಶೋಧನೆ'. ಆದರೆ ಈ ನಾಲ್ಕು ಜನರಂತೆ ಉಳಿದವರು ದಿನದ ಒಂದು ಭಾಗ ಅನ್ನಿಸುವುದಿಲ್ಲ,ಯಾಕೋ ಅಷ್ಟು ಹತ್ತಿರವಾಗುವುದಿಲ್ಲ.
ಮಾಧ್ಯಮಗಳ,ಅದರಲ್ಲೂ ಪತ್ರಿಕೆಗಳ ಅಪಕ್ವತೆಯನ್ನ ಕಂಡಾಗ ಲಂಕೇಶ್ ನೆನಪಾಗುತ್ತಾರೆ. ಅರ್ಥವಾಗದ ಸಂಸ್ಕೃತ ಶ್ಲೋಕವನ್ನ ಮುಸ್ಸಂಜೆ ಯಾರಾದರೂ ಹೇಳುವುದು ಕೇಳಿದ ತಕ್ಷಣ 'ಬನದ ಕರಡಿಗೆ ನಿಮ್ಮ ಭಗವದ್ಗೀತೆ ಬೇಕಿಲ್ಲ' ಎಂಬ ಸಾಲು ನೆನಪಾಗುತ್ತದೆ. ಕೆಲಸಕ್ಕೆ ಬರುವ ಗಿಡ್ಡನನ್ನೋ,ಬೀರಪ್ಪನನ್ನೋ ಕಂಡ ತಕ್ಷಣ ತೇಜಸ್ವಿ ಮತ್ತವರ ಪಾತ್ರಗಳು ಕಣ್ಣ ಮುಂದೆ ಬರುತ್ತಾರೆ. ಬೆಟ್ಟ ಕಡಿದು ತೋಟ ಮಾಡಿದ ಸಣ್ಣಜ್ಜನ ಸುದ್ದಿ ಹೇಳುವಾಗ ಕಾರಂತರ 'ಬೆಟ್ಟದ ಜೀವ' ನೆನಪಾಗುತ್ತದೆ. ದಕ್ಷಿಣೆಗೆ ಬಾಯಿಬಿಡುವ,ದೇವಸ್ಥಾನದಲ್ಲಿಯೇ ಹೊಡೆದಾಡುವ ವೈದಿಕರನ್ನ ಕಂಡಾಗ 'ಸಂಸ್ಕಾರ' ನೆನಪಾಗುತ್ತದೆ. ಬಹುಶಃ ಪ್ರತಿಯೊಬ್ಬ ಸಾಹಿತ್ಯಪ್ರಿಯನಿಗೂ ತನ್ನ ನೆಚ್ಚಿನ ಲೇಖಕ,ಕೃತಿ ಹೀಗೇ ನೆನಪಾಗಬಹುದು. ಆದರೆ ಈ ನಾಲ್ಕು ಜನರ ಪ್ರಭಾವ ಇಲ್ಲಿಗೇ ಮುಗಿಯುವುದಿಲ್ಲ!
ತೇಜಸ್ವಿ ಮತ್ತು ಕಾರಂತರು ಬದುಕಾದರೆ ಉಳಿದ ಇಬ್ಬರು ವಿಮರ್ಶೆ. ವಾಸ್ತವಕ್ಕೆ ಅನಂತಮೂರ್ತಿ ಮತ್ತು ಲಂಕೇಶ್ ಪ್ರತಿಕ್ರಯಿಸಿದಷ್ಟು ತೀವ್ರವಾಗಿ,ಸಮಂಜಸವಾಗಿ,ನಿಷ್ಠುರವಾಗಿ ಯಾರೂ ಪ್ರತಿಕ್ರಿಯೆ ನೀಡಿರಲಿಕ್ಕಿಲ್ಲ. ಇದೇ ಕಾರಣಕ್ಕಾಗಿ 'ಸಮಾಜದ ಸಮಸ್ಯೆ ಬಗೆಹರಿಸುವುದು ನಮ್ಮ ಕೆಲಸವಲ್ಲ' ಎನ್ನುವವರಿಗಿಂತ,ಮೌಲ್ಯವಾದಿಗಳಿಗಿಂತ ಇವರು ಹತ್ತಿರವಾಗುವುದು.ಇವತ್ತು ಮೋದಿಯೆನ್ನುವ ಕಾರ್ಪೋರೇಟ್ ರಾಕ್ಷಸನ ಸಾಹಸಗಳ ಬಗ್ಗೆ ಯಾರಾದರೂ ಮಾತಾಡುತ್ತಿದ್ದರೆ ಅದು ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ ಲಂಕೇಶ್ ಮತ್ತು ಅನಂತಮೂರ್ತಿಯವರ ಕಾರಣದಿಂದ! ಇಲ್ಲಿ ಈ ಇಬ್ಬರು ಕೇವಲ ವ್ಯಕ್ತಿ ಅಥವಾ ಸಾಹಿತಿಗಳಾಗಿ ಉಳಿದಿಲ್ಲ,ಬದಲಾಗಿ ಒಂದು ಆಲೋಚನಾ ಮಾರ್ಗವಾಗಿದ್ದಾರೆ. ಸನಾತನಿಗಳು,ಸುಸಂಸ್ಕೃತರು ಎಷ್ಟೇ ಬೋಬ್ಬಿಟ್ಟರೂ,ಧಿಕ್ಕಾರ ಕೂಗಿಕೊಂಡರೂ,ಶಾಸ್ತಿ-ಶಾಂತಿ ಮಾಡಿದರೂ,ವಿವಾದಗಳು ಸೃಷ್ಟಿಯಾದರೂ ಮರೆಯಾಗದ ಜಾಗೃತ ಸ್ಥಿತಿ ಅದು.
ಲೇಖಕನೊಬ್ಬನ ಬಗ್ಗೆ ಪ್ರತಿಯೊಬ್ಬನಿಗೂ ಬೇರೆ ಬೇರೆ ರೀತಿಯ ಧೋರಣೆಗಳಿರುತ್ತವೆ. ನನಗೆ ಬೇಂದ್ರೆ ಅರ್ಥವಾಗುವುದಿಲ್ಲ,ಅಡಿಗರು ಕ್ಲಿಷ್ಟವೆನಿಸುತ್ತಾರೆ,'ಕವಲು' ಕೆಟ್ಟದಾಗಿ ಕಾಣುತ್ತದೆ,ಡುಂಡಿರಾಜ್ ಅಷ್ಟೊಂದು ಇಷ್ಟವಾಗುವುದಿಲ್ಲ,ಎಚ್.ಎಸ್.ವೆಂಕಟೇಶಮೂರ್ತಿಯಂಥವರು ಕೇಳಲು ಇಂಪಾದರೂ ಅವರನ್ನು ಓದಲು ಸಾಧ್ಯವಾಗುವುದಿಲ್ಲ,ಸಿದ್ಧಲಿಂಗಯ್ಯನವರನ್ನ ಕಂಡಾಗ ಬೇಜಾರಾಗುತ್ತದೆ,ಕಾರ್ನಾಡರು ತುಂಬಾ ಮಾಡರ್ನ್ ಆಗಿಬಿಟ್ಟರೇನೋ ಅನ್ನಿಸಿಬಿಡುತ್ತದೆ...ಆದರೆ ಇದ್ಯಾವುದೂ ಒಬ್ಬ ಓದುಗನನ್ನ 'ಕೆಣಕುವುದಿಲ್ಲ' ಮತ್ತು ಇದರಲ್ಲಿ ಓದುಗನ ನ್ಯೂನತೆಯೂ ಇರಬಹುದು. (ಏಕೆಂದರೆ ಈ ಲೇಖಕರು ಹಲವರಿಗೆ ಇಷ್ಟವಾಗುತ್ತಾರೆ) ಹಾಗೆಂದ ಮಾತ್ರಕ್ಕೆ ಡುಂಡಿರಾಜ್ ರನ್ನೋ,ವೆಂಕಟೇಶಮೂರ್ತಿಯವರನ್ನೋ ತೆಗಳಬೇಕು,ಯಾರಾದರೂ ತೆಗಳಿದರೆ ಚಪ್ಪಾಳೆ ತಟ್ಟಬೇಕು ಎಂದಲ್ಲ.  ಅನಂತಮೂರ್ತಿಯವರು ಆಳ್ವಾಸ್ ನುಡಿಸಿರಿಯ ಉದ್ಘಾಟಕರಾದಾಗ ಹಲವರು ಆಕ್ಷೇಪಿಸಿದ್ದನ್ನು,ಬರಗೂರರ ಪಾಲ್ಗೊಳ್ಳುವಿಕೆಯನ್ನು ಪ್ರಶ್ನಿಸಿದ್ದನ್ನು ಇಲ್ಲಿ ಸ್ಮರಿಸಬಹುದು. ಕಳೆದ ತಿಂಗಳು ಧಾರವಾಡದಲ್ಲಿ ನಡೆದ 'ಸಾಹಿತ್ಯ ಸಂಭ್ರಮ'ವನ್ನೂ ಹಲವರು ಆಕ್ಷೇಪಿಸಿದ್ದರು. ಇಂಥ ಆಕ್ಷೇಪಗಳು ಸಾಹಿತ್ಯ ವಲಯದಲ್ಲಿ ಯಾವತ್ತಿನಿಂದಲೂ ಇವೆ ಮತ್ತು ಇರಬೇಕು ಕೂಡ. ಇದನ್ನೇ ಜಾಗೃತ ಸ್ಥಿತಿ ಎಂದಿದ್ದು. ಎಲ್ಲದಕ್ಕೂ ಮುಖ್ಯವಾಗಿ ಒಬ್ಬ ಲೇಖಕನ ಬಗ್ಗೆ ಮಾತನಾಡುವ ಮುನ್ನ ಆವನ ಕೆಲವು ಕೃತಿಗಳನ್ನಾದರೂ ಓದಿರಬೇಕು.ಅನಂತಮೂರ್ತಿಯವರನ್ನು ತೆಗಳುವ ಬಹುಪಾಲು ಸನಾತನಿಗಳಿಗೆ 'ಸಂಸ್ಕಾರ'ದಲ್ಲಿ ನಿಜಕ್ಕೂ ಏನಿದೆಯೆಂದು ಗೊತ್ತಿಲ್ಲ,'ಸೂರ್ಯನ ಕುದುರೆ'ಯಂಥ ಕಥೆಯ ಹೆಸರನ್ನೂ ಕೇಳಿಲ್ಲ,'ಪ್ರಜ್ನೆ ಮತ್ತು ಪರಿಸರ' ಎಂಬ ಪುಸ್ತಕವಿದೆಯೆಂಬುದೇ ಗೊತ್ತಿಲ್ಲ,ಇನ್ನು ಬ್ರೆಕ್ಟ್,ಯೇಟ್ಸ್,ಬ್ಲೇಕ್ ಮುಂತಾದವರ ಕವಿತೆಗಳ ಅನುವಾದ,ವಿಮರ್ಶೆಗಳ ಮಾತು ಬೇಡ ಬಿಡಿ! ಕುಂವೀಯವರ 'ದೇವರ ಹೆಣ'ವನ್ನೂ ಸನಾತನಿಗಳು ಓದಿಲ್ಲ,ಓದಿದ್ದರೆ ‘ಗೋಹತ್ಯೆ’ಯೆಂದು ಬೊಬ್ಬೆ ಹಾಕುತ್ತಿದ್ದರೇನೋ!
ಪ್ರಶಸ್ತಿಗಳೇ ನಾನ್ಸೆನ್ಸ್ ಅನ್ನಿಸುತ್ತದೆ ಕೆಲವೊಮ್ಮೆ! ಪ್ರಶಸ್ತಿ ನೀಡುವ ಸಮಾರಂಭಗಳು,ಸಮ್ಮೇಳನಗಳಲ್ಲಿ ಆಡಂಬರ,ಊಟದ ವ್ಯವಸ್ಥೆ ಮುಖ್ಯವಾಗುತ್ತದೆಯೇ ಹೊರತು ಸಾಹಿತ್ಯವಲ್ಲ! ಪ್ರಶಸ್ತಿ ಪಡೆದ ಸಾಹಿತಿ ನಾಲ್ಕು ದಿನ ಸುದ್ದಿಯಲ್ಲಿದ್ದು ಆಮೇಲೆ ಮರೆತುಹೋಗುತ್ತಾನೆ. ಆದರೂ ಲೇಖಕನಲ್ಲಿ ಅದರಲ್ಲೂ ಹೊಸ ಲೇಖಕನೊಬ್ಬನಲ್ಲಿ ಆತ್ಮವಿಶ್ವಾಸ ತುಂಬಲು ಪ್ರಶಸ್ತಿಗಳು ಬೇಕು. ಹಾಗೆಂದ ಮಾತ್ರಕ್ಕೆ ಪ್ರಶಸ್ತಿ ಸಿಕ್ಕವರು ಉತ್ತಮ ಲೇಖಕರು,ಉಳಿದವರು ಅಲ್ಲ ಅನ್ನಲಾಗುವುದಿಲ್ಲ. ಲೇಖಕರು ಪ್ರಶಸ್ತಿಗಾಗಿ,ಪ್ರಚಾರಕಾಗಿ ಹೇಳಿಕೆ ನೀಡುತ್ತರೆನ್ನುವುದೂ ತಪ್ಪು. ಅನಂತಮೂರ್ತಿಯವರು ಪ್ರಚಾರಕ್ಕಾಗಿ ಮೋದಿ ವಿರುದ್ಧ ಹೇಳಿಕೆ ನೀಡುತ್ತಾರೆ,ಕುಂವೀಯವರು ಯಾವುದೋ ಪ್ರಶಸ್ತಿಗಾಗಿ ಲಾಬಿ ನಡೆಸುತ್ತಿದ್ದಾರೆ ಅನ್ನುವುದರಲ್ಲಿ ಅರ್ಥವಿಲ್ಲ. ತನ್ನ ಕೃತಿಯ ಗೆಲುವಿನ ಎದುರು ಪ್ರಶಸ್ತಿಗಳು,ಹೊಗಳಿಕೆಗಳು ದೊಡ್ಡದಲ್ಲ ಎಂಬ ಕನಿಷ್ಟ ಯೋಚನೆಯನ್ನೂ ಮಾಡದವ ಸಾಹಿತಿಯೆನಿಸಿಕೊಳ್ಳಲಾರ ಎಂಬುದು ನನ್ನ ನಂಬಿಕೆ. ಇನ್ನು ಅನಂತಮೂರ್ತಿ ಮತ್ತು ಕಾರ್ನಾಡ್ ಕನ್ನಡಕ್ಕಾಗಿ ಏನೂ ಮಾಡಿಲ್ಲವೆಂದು ದೂರುವ ಅವಶ್ಯಕತೆಯೂ ಇಲ್ಲ. ‘ತುಘಲಕ್’ನಂಥ ನಾಟಕವೊಂದು ಸಾಕು ಕಾರ್ನಾಡರನ್ನ ಮೆಚ್ಚಿಕೊಳ್ಳೋಕೆ. ಆರ್.ಕೆ.ನಾರಾಯಣ್ ವಿಷಯದಲ್ಲೂ ಇಂಥ ವಿವಾದವಾಗಿದ್ದನ್ನು ಇಲ್ಲಿ ಸ್ಮರಿಸಬಹುದು. ಇವರೆಲ್ಲ ನಮ್ಮವರೆಂಬುದು ನಿಜಕ್ಕೂ ಹೆಮ್ಮೆ ಪಡಬೇಕಾದ ಸಂಗತಿ ಮತ್ತು ಅವರು ನಮ್ಮವರೆಂದುಕೊಳ್ಳುವಷ್ಟು ಉದಾರ ಮನೋಭಾವ ಅತ್ಯಗತ್ಯ ಕೂಡ.ಸಾಹಿತ್ಯವೆಂದರೆ ಹೇಗೆ ಕೇವಲ ಕಥೆ ಅಥವಾ ಕವನವಲ್ಲವೋ ಹಾಗೆಯೇ ಸಾಹಿತ್ಯವೆಂದರೆ ಕೇವಲ ಕುವೆಂಪು ಅಥವಾ ಕುಮಾರವ್ಯಾಸನಲ್ಲ. ಇವತ್ತಿನ ಸಿದ್ಧಲಿಂಗಯ್ಯನವರನ್ನು ನೋಡಿ ಕನ್ನಡ ಸಾಹಿತ್ಯವಲ್ಲಿ ಅವರ ಕವಿತೆಗಳಿಗಿರುವ ಮಹತ್ವವನ್ನು ಅಲ್ಲಗಳೆಯಲಾಗುವುದಿಲ್ಲ. ಈ ಹೇಳಿಕೆ ನೀಡಿದರೆಂಬ ಕಾರಣಕ್ಕಾಗಿ ಕುಂವೀಯವರ ಮೇಲಿನ ಗೌರವವೂ ಕಡಿಮೆಯಾಗುವುದಿಲ್ಲ.ಆದರೆ ಸಾಮಾನ್ಯ ಜನರಿಂದ ಈಗಾಗಲೇ ದೂರವಾಗುತ್ತಿರುವ ಸಾಹಿತಿಗಳು ಒಳಜಗಳ,ಭಿನ್ನಭಿಪ್ರಾಯಗಳಿಂದ ನಗೆಪಾಟಲಿಗೀಡಾಗಬಾರದು ಅಷ್ಟೇ. ಕೈಗಾರಿಕೀಕರಣ,ಜಾತೀವಾದ,ಕೋಮುವಾದ,ಭ್ರಷ್ಟಾಚಾರ,ಆಂಗ್ಲಮಾಧ್ಯಮ ಶಾಲೆಗಳ ಹಾವಳಿ ಹೀಗೆ ಸಾಹಿತಿಗಳು,ಬುದ್ಧಿಜೀವಿಗಳು ಆಲೋಚಿಸಬೇಕಾದ ಹಲವಾರು ವಿಚಾರಗಳಿರುವಾಗ ಪ್ರಶಸ್ತಿಯ ವಿಚಾರದಲ್ಲಿ ತಾವೇ ವಿವಾದಕ್ಕೀಡಾಗುವುದು ಖಂಡಿತ ಉತ್ತಮ ಬೆಳವಣಿಗೆಯಲ್ಲ.
ಇನ್ನು ಇವತ್ತಿನ ಮಕ್ಕಳಿಗೆ ಸಾಹಿತ್ಯದ ಬಗ್ಗೆ ಗೊತ್ತಿರುವುದು ಅಷ್ಟರಲ್ಲೇ ಇದೆ. ಪ್ರಶಸ್ತಿ ಪಡೆದ ಲೇಖಕರ ಹೆಸರು ಗೊತ್ತಿರಬಹುದು ಆದರೆ ಅವರ ಕೃತಿಗಳನ್ನ ಎಷ್ಟು ಮಕ್ಕಳು ಓದುತ್ತಾರೆ? ಸಾಹಿತ್ಯದ ಬದಲು ಧರ್ಮ ಗ್ರಂಥಗಳನ್ನ ಓದಿಸುತ್ತಿರುವ,ಓದಿಸಲು ಹೊರಟಿರುವ ಕಾಲ ಇದು! ಸಾಹಿತ್ಯ ಅಂದರೆ ಸಿನೆಮಾ ಹಾಡು,ಕನ್ನಡಾಭಿಮಾನ ಅಂದರೆ ನವೆಂಬರಿನಲ್ಲಿ ಬಾವುಟ ಹಾರಿಸುವುದು ಎಂದುಕೊಂಡವರೂ ಇದ್ದಾರೆ.ಪ್ರಾಥಮಿಕ ಹಂತದಲ್ಲಿಯೇ ವರ್ಷಕ್ಕೆ ೩೦-೪೦ ಸಾವಿರ ಸುಲಿಗೆ ಮಾಡುವ ಕಾನ್ಮೆಂಟುಗಳಲ್ಲಿ ಗಾಂಧಿ ಮತ್ತು ಅಂಬೇಡ್ಕರರಂತೆ ಪ್ರಶಸ್ತಿ ವಿಜೇತ ಸಾಹಿತಿಗಳು ಕೂಡ ಫೋಟೋಕ್ಕಷ್ಟೇ ಸೀಮಿತವಾಗಿದ್ದಾರೆ! ವರ್ಷಕ್ಕೊಮ್ಮೆ ವಾರ್ಷಿಕೋತ್ಸವದಲ್ಲಿ ‘ಹಚ್ಚೇವು ಕನ್ನಡದ ದೀಪ’ ಎನ್ನುವಷ್ಟು ಕನ್ನಡವೂ ಉಳಿದಿಲ್ಲ ಕೆಲವು ಶಾಲೆಗಳಲ್ಲಿ. ಯುನಿವರ್ಸಿಟಿಗಳಲ್ಲಿ ಸಾಹಿತ್ಯವನ್ನು ಅಭ್ಯಾಸ ಮಾಡುವವರು ಕೂಡ ಲೈಬ್ರರಿಯಲ್ಲಿ ಆರಿಸಿಕೊಳ್ಳುವುದು ರಾಬಿನ್ ಶರ್ಮ,ಚೇತನ್ ಭಗತ್,ಶೋಭಾ ಡೇ ಮುಂತಾದವರನ್ನೇ ಹೊರತು ಚಿತ್ತಾಲರು ಅಥವಾ ಕಾರಂತರನ್ನಲ್ಲ. ಇಷ್ಟರ ಮಧ್ಯೆಯೂ ಒಬ್ಬ ಹೊಸ ಓದುಗ ಅಪ್ಪಿತಪ್ಪಿ ಕನ್ನಡ ಸಾಹಿತ್ಯದ ಗೀಳು ಹತ್ತಿಸಿಕೊಂಡರೆ ಅದಕ್ಕೆ ಕಾರಣ ತೇಜಸ್ವಿಯಂಥವರು. ಪ್ರಶಸ್ತಿ ಪಡೆಯದಿದ್ದರೂ ಎಲ್ಲ ವಯೋಮಾನದವರಿಗೆ ಓದುವ ಗೀಳು ಹತ್ತಿಸಬಲ್ಲ ಲೇಖಕರು ಇವರು. ಒಮ್ಮೆ ಸಾಹಿತ್ಯದ ಹುಚ್ಚು ಹಿಡಿದವನು ಹೊಸ ಪುಸ್ತಕ ಓದುವಾಗ ಅದನ್ನು ಬರೆದವನಿಗೆ ಪ್ರಶಸ್ತಿ ಬಂದಿದೆಯೋ ಇಲ್ಲವೋ ಎಂದು ಯೋಚಿಸುವುದಿಲ್ಲವೆಂದು ನನಗನ್ನಿಸುತ್ತದೆ.
ಅಂದಹಾಗೆ ಇಂಥ ಸಂದರ್ಭದಲ್ಲಿ ಚಪ್ಪಾಳೆ ತಟ್ಟಿ ನಗುವಾಗ ಮನಸ್ಸಿನಲ್ಲಿಯೇ ಗೊಣಗಿಕೊಳ್ಳೋಕೆ ಯಾರಿಗೂ ಅರ್ಥವಾಗದ ಶ್ಲೋಕ ಇರಬೇಕಿತ್ತೆಂದು ಯುವ ಕೇಸರಿಯೊಬ್ಬನಿಗೆ ಅನ್ನಿಸಿ ಗೂಗಲ್ಲಿನಲ್ಲಿ ವೇದದ ತುಣುಕುಗಳನ್ನು ಹುಡುಕಿದನಂತೆ!

February 9, 2014

ಒರಲೆಯಂತೆ ಆವರಿಸಿಕೊಂಡಳು,
ಈಗ
ನನ್ನ ಆಕಾರಕ್ಕೆ
ಅವಳ ರೂಪ!

February 6, 2014

( ಮತ್ತೆ ಯಾಕೋ ನೆನಪಾಯಿತು…)

ಬ್ರೆಕ್ಟನಿಗೆ

ನಿನ್ನನ್ನು ಮತ್ತೆ ಮತ್ತೆ ಓದುತ್ತಿದ್ದೇನೆ ಬ್ರೆಕ್ಟ್,
ನಿನ್ನ ಬಾಯಲ್ಲಿ ರಾರಾಜಿಸುತ್ತಿದ್ದ ಸಿಗಾರಿನಂತೆ
ನನ್ನ ಮಡಿವಂತಿಕೆ,ಸಂಕುಚಿತತೆ ಉರಿಯತೊಡಗಿದವು
ಬಿಳಿಯ ಹಾಳೆಯ ಮೇಲೆಲ್ಲಾ ಬೂದಿ ಚೆಲ್ಲಾಡಿತು!

ನಿನಗೆ ಅಶ್ಲೀಲವೆನಿಸಿದ್ದ,ನನಗೆ ಸಾಮಾನ್ಯವಾಗಿದ್ದ
ಪ್ರಾಸಗಳು ದಿಕ್ಕಾಪಾಲಾದವು ಬ್ರೆಕ್ಟ್,
ಒತ್ತಡದಲ್ಲಿಯೂ ಒಮ್ಮೆಲೇ ಹಗುರಾಗಿಬಿಟ್ಟೆ
ಮರುಕ್ಷಣವೇ ಮತ್ತೆ ಭಾರವಾದೆ.

ಇಂದು ಪ್ರಶ್ನೆಗಳೇ ಹುಟ್ಟುವುದಿಲ್ಲ ಬ್ರೆಕ್ಟ್,
ಉತ್ತರಗಳಿಗೆ ಇನ್ನೆಲ್ಲಿಯ ಹುಡುಕಾಟ?!
ಸಹಜ ಅಸಹಜಗಳ ವ್ಯತ್ಯಾಸ ತಿಳಿದರಲ್ಲವೇ
ದ್ವಂದ್ವದ ಮಾತು?
ನೀನು ಬೆತ್ತಲಾಗಿ ಹುಚ್ಚನಂತೆ ಅಲೆದು
ಶೋಧಿಸಿಟ್ಟ ಉತ್ತರಗಳು,ಕೇಳಿಕೊಂಡ ಪ್ರಶ್ನೆಗಳು
ಶಾಸ್ತ್ರಗಳ ಮುಂದೆ ಮಂಕಾಗಿ
ಮೂಲೆ ಸೇರಿವೆ ಅಷ್ಟೇ!

ಪ್ರಪಂಚ ಖಂಡಿತ ಬದಲಾಗುತ್ತ(ತ್ತಿ)ದೆ ಬ್ರೆಕ್ಟ್,
ವಶೀಕರಣಕ್ಕೆ ಶಿಕ್ಷಣ,ಮೈ ಮುಚ್ಚಿಕೊಳ್ಳಲು ನೀತಿ
ಸೇವೆಗೆ ಪ್ರಚಾರ,ಗಳಿಕೆಗೆ ಭ್ರಷ್ಟಾಚಾರ
ಸಂಬಂಧಕ್ಕೆ ಸೂತ್ರಗಳು,ಮುಕ್ತಿಗೆ ಸಿದ್ಧಾಂತಗಳು
ಕ್ಷಣ ಕ್ಷಣಕ್ಕೂ ನಡೆಯುತ್ತಿರುವುದು ಅಭಿ’ವೃದ್ಧಿ’ಯೇ!
ಮನೆಯಲ್ಲ ಜಗತ್ತೇ ಹೊತ್ತಿ ಉರಿಯುತ್ತಿದೆ
ಬುದ್ಧನಿಗೆ ಮಾತು ಮರೆತುಹೋಗಿದೆ.

ನಿನ್ನ ಗೊಂದಲಪುರ ಇಂದಿಗೂ ಇದೆ ಬ್ರೆಕ್ಟ್,
ಸುಣ್ಣ ಬಣ್ಣ ಬಳಿಸಿಕೊಂಡು ಅಂದಿಗಿಂತ ಚಂದವಾಗಿದೆ!
ಪಾರಂಗತರ ಸಂಧಾನ-ಸಂಭೋಗ ಎಗ್ಗಿಲ್ಲದೆ ನಡೆಯುತ್ತಿದೆ
ಶಂಖ ಜಾಗಟೆಗಳು ಮೊಳಗುತ್ತಲೇ ಇವೆ
ಬಡಕಲು ಮೈಯ ಸೂಳೆ ಸ್ಮಶಾನದಲ್ಲಿ ಬಿಕ್ಕುತ್ತಿದ್ದಾಳೆ
ಲೆಕ್ಕ ಸಿಗದಷ್ಟು ‘ಮಕ್ಕಳು’ ಹುಟ್ಟುತ್ತಲೇ ಇದ್ದಾರೆ
ಆಕ್ರಂದನ ಮುಗಿಲು ಮುಟ್ಟಿದೆ
ತಂಪು ಕೋಣೆಯ ಕಿವಿಗಳನ್ನಲ್ಲ ಅಷ್ಟೇ!

ಹೊಸ ಯುಗ,ಹೊಸ ಪ್ರಭೆ
ಕವಿತೆ,ದೇಶ,ಕಾಲ
ಸ್ವಾತಂತ್ರ್ಯ,ಕನಸು,ಗೆಲುವು…
ನನಗೆ ಭರವಸೆತಿಲ್ಲ ಬ್ರೆಕ್ಟ್,
ಎದೆ ಬಡಿದುಕೊಳ್ಳಲೂ ಹೆದರುತ್ತದೆ
ಉಸಿರು ಯಾರದೋ ಅಪ್ಪಣೆಗೆ ಕಾಯುತ್ತದೆ
ಸೋತ ಕವಿತೆ ನನ್ನನ್ನೇ ಕೊಲ್ಲುತ್ತದೆ.
ಉಟ್ಟ ಬಟ್ಟೆಯಲ್ಲೇ ಎದ್ದು ನಡೆಯೋಣವೆಂದರೆ
ಪ್ರೀತಿ,ಕರ್ತವ್ಯ,ಸ್ವಾರ್ಥ ತಡೆಯುತ್ತವೆ,
ಅಕ್ಷರಗಳು ಮತ್ತೆ ಬಿಕ್ಕುತ್ತವೆ…

ಇಷ್ಟಾದರೂ ನೀನೇ ಸರ್ವಶ್ರೇಷ್ಠನೆಂದು
ನಾ ಒಪ್ಪಲಾರೆ ಬ್ರೆಕ್ಟ್,
ನೀನು ಕೇವಲ ಒಬ್ಬ ಹಿಟ್ಲರನನ್ನು ಕಂಡಿರಬಹುದು
ಆದರೆ ನಾನು
ಹಿಟ್ಲರರ ನಡುವೆ ಬದುಕುತ್ತಿದ್ದೇನೆ!!!

( ಆಗಸ್ಟ್ 2010 )

February 5, 2014

ಕಚ್ಚಾಡುವ ಕೆಟ್ಟ ಕಾಲದಲ್ಲಿ
ಹೂವು ಒಲವು
ಪ್ರಾಸದ ಕವಿತೆ,
ಅವಳು ವಿಧವೆಯಾದ ದಿವಸ
ವಡೆ ಪಾಯಸ
ಭಾರೀ ಊಟ!

****************

ತೊಟ್ಟಿಯಲ್ಲಿ
ತೊಟ್ಟಿಲಲ್ಲಿ
ಹುಟ್ಟಿದವರ
ಗೋತ್ರ ಬೇರೆಯಾದರೂ
ಜಾತಿ ಒಂದೇ ಆಗಿತ್ತಂತೆ!

****************

'ಧರ್ಮ ಸಂಸ್ಥಾಪನಾರ್ಥಾಯ
ಸಂಭವಾಮಿ ಯುಗೇ ಯುಗೇ'
'ಮುನ್ಸಿಪಾಲ್ಟಿಯ ಕುಡಿಯೋ ನೀರು
ಇವತ್ತೂ ಬಂದಿಲ್ಲ!!!'

February 2, 2014

ಗೋಹತ್ಯೆ,ಗೋಕಥೆ ಮತ್ತು ಹಳಿಯಾಳದ ಹಳ್ಳಿಗಳು

ಮೊನ್ನೆ ಯಾರೋ ಹೇಳ್ತಿದ್ದರು,ಗೋ ಸಂತತಿ ನಾಶವಾಗೋಕೆ ಮುಸ್ಲೀಮರು ಕಾರಣವಂತೆ! ದನಗಳನ್ನ ಕದ್ದುಕೊಂಡು ಹೋಗಿದ್ದ ಕೆಲವು ಖದೀಮ ಮುಸ್ಲೀಮರು ಪೋಲೀಸರ ಕೈಗೆ ಸಿಕ್ಕಿಬಿದ್ದ ಸುದ್ದಿಯನ್ನ ನಾವು ಆಗಾಗ ಟೀವಿಯಲ್ಲಿ,ಪೇಪರಿನಲ್ಲಿ ನೋಡಿದರೂ ಅದರಿಂದ ಗೋ ಸಂತತಿ ನಾಶವಾಯಿತೆಂದು ನನಗನ್ನಿಸುವುದಿಲ್ಲ. ವಿಚಿತ್ರವೆಂದರೆ ಇವತ್ತು ಗೋ ಸಂತತಿ ನಾಶವಾಯಿತೆಂದು ಯಾರು ಬೊಬ್ಬೆ ಹಾಕುತ್ತಿದ್ದಾರೋ ಆ ಗೋಪ್ರಿಯರಿಂದಲೇ ದನಗಳು ಮಾಯವಾಗಿವೆಯೆಂದು ನನಗನ್ನಿಸುತ್ತದೆ!

ಆಕಳು ಪ್ರತಿನಿಧಿಸುವುದು ಕೃಷಿ ಸಂಸ್ಕೃತಿಯನ್ನ ಅಂದರೆ ಹಳ್ಳಿಗಳನ್ನ. ಹಳ್ಳಿಗಳೇ ಕಾಣಸಿಗದ ಈ ಶತಮಾನದಲ್ಲಿ ಆಕಳು ಅಪರೂಪವಾಗಿರೋದು ಆಶ್ಚರ್ಯದ ಸಂಗತಿಯೇನಲ್ಲ. ನಾನು ಚಿಕ್ಕವನಾಗಿದಾಗ ಮೂರು ಆಕಳು,ಒಂದು ಎಮ್ಮೆ ಮತ್ತು ಅವುಗಳ ಕರುಗಳಿಂದ ತುಂಬಿಕೊಂಡಿದ್ದ ನಮ್ಮನೆಯ ಕೊಟ್ಟಿಗೆ ಇವತ್ತು ಖಾಲಿಯಾಗಿದೆ. ಮೂರೂರಿನ ಮತ್ತು ಮೂರೂರಿನಂಥ ಹಳ್ಳಿಗಳಲ್ಲಿನ ಸಾವಿರಾರು ಮನೆಗಳ ಕೊಟ್ಟಿಗೆಗಳು ಕೂಡ ಖಾಲಿಯಾಗಿವೆ. ಕಾರಣ ಇಷ್ಟೇ,ಕೃಷಿ ಇವತ್ತು ಜೀವನೋಪಾಯವಾಗಿ ಉಳಿದಿಲ್ಲ. ಆಕಳನ್ನ ‘ಗೋಮಾತೆ’ಯೆಂದು ಪೂಜಿಸುವವರು ನಾಯಿ ಮತ್ತು ಬೆಕ್ಕು ಸಾಕಿದಂತೆ ಒಂದು ಆಕಳನ್ನ ಸಾಕಲು ತಯಾರಿಲ್ಲ!

ಇದೆಲ್ಲ ಶುರುವಾದದ್ದು ಪಟ್ಟಣಗಳ ಕಡೆಗಿನ ಆಕರ್ಷಣೆಯ ಫಲವಾಗಿ,ಅಂದರೆ ’ನೌಕರಿ’ಯ ಫಲವಾಗಿ. ಮೊದಮೊದಲು ಮಾಸ್ತರನಾಗಿ,ಬ್ಯಾಂಕ್ ನೌಕರನಾಗಿ ಅಥವಾ ಇನ್ಯಾವುದೋ ಸರ್ಕಾರಿ ನೌಕರನಾಗಿ ಊರುಬಿಡುತ್ತಿದ್ದರು. ಆದರೆ ಯಾವಾಗ ಐಟಿ-ಬಿಟಿ ಕಂಪನಿಗಳ ಅಮಲು ತಲೆಗೇರಿತೋ ಆಗಲೇ ಹಳ್ಳಿಗಳ ಹಂಚಿನ ಮನೆಗಳು ಹಠಾತ್ತನೆ ಖಾಲಿಯಾಗತೊಡಗಿದವು. ಸಗಣಿ ತೆಗೆಯಲು ಜನರಿಲ್ಲದೆ ದನಗಳು ಕಸಾಯಿಖಾನೆ ಸೇರಿದವು!

ಇವತ್ತು ರಾಮಚಂದ್ರಾಪುರ ಮಠದ ವತಿಯಿಂದ ಗೋಶಾಲೆಗಳು ತಲೆಯೆತ್ತಿವೆ,ಗೋ ಕಥೆಗಳು ನಡೆಯುತ್ತಿವೆ,ಗೋ ಉತ್ಪನ್ನಗಳು ತಯಾರಾಗುತ್ತಿವೆ,ಮಾರಾಟವಾಗುತ್ತಿವೆ! ಇದಕ್ಕೆಲ್ಲ ಬೆಂಗಳೂರಿನಿಂದಷ್ಟೇ ಅಲ್ಲದೆ ವಿದೇಶಗಳಿಂದಲೂ ಹಣ ಹರಿದುಬರುತ್ತಿದೆ. ಹಳ್ಳಿಗಳಲ್ಲಿ ಉಳಿದವರಿಂದಲೂ ‘ವಂತಿಗೆ’ ಸ್ವೀಕರಿಸಲಾಗುತ್ತಿದೆ. ಸಗಣಿಯ ವಾಸನೆ ಕೂಡ ಸೋಂಕದ ಮನೆಗಳ ಬಾಗಿಲ ಮೇಲೆ ‘ಗೋ ಪ್ರೇಮಿ ಮನೆ’ಯೆಂಬ ಫಲಕ ‘ಕಡ್ಡಾಯವಾಗಿ’ ರಾರಾಜಿಸುತ್ತಿದೆ. ಪಂಚಗವ್ಯಕ್ಕೆ ಬೇಕಾದ ಗೋಮೂತ್ರವನ್ನು ಕೂಡ ಬಾಟಲಿಯಲ್ಲಿ ತುಂಬಿ ಮಾರುವಷ್ಟರಮಟ್ಟಿಗೆ ‘ಸಂಸ್ಕೃತಿ’ ಮುಂದುವರಿದಿದೆ!

ಸ್ವಾರಸ್ಯಕರ ಸಂಗತಿಯೆಂದರೆ ಗೋ ಕಥೆ ಕೇಳದ,ಗೋ ಪ್ರೇಮಿಗಳೆಂದು ತಮ್ಮನ್ನು ತಾವು ಕರೆದುಕೊಳ್ಳದ,ಗೋ ಸಂಸ್ಕೃತಿ ನಾಶವಾಗುತ್ತಿದೆಯೆಂದು ಬೊಬ್ಬೆ ಹಾಕದ ಒಂದು ವರ್ಗ ಇವತ್ತಿಗೂ ದನಗಳನ್ನ ತನ್ನ ಪಾಡಿಗೆ ತಾನು ಸಾಕುತ್ತಿದೆ! ನಾನು ವಾಸಿಸುತ್ತಿರುವ ಹಳಿಯಾಳ ಮತ್ತು ಹಳಿಯಾಳದ ಸುತ್ತಲಿನ ಹತ್ತಾರು ಹಳ್ಳಿಗಳಲ್ಲಿ ಇವತ್ತಿಗೂ ದನಗಳನ್ನ ಭಾರೀ ಸಂಖ್ಯೆಯಲ್ಲಿ ಸಾಕಲಾಗುತ್ತಿದೆ. ಇಲ್ಲಿ ಗಮನಿಸಬೇಕಾದ ಮತ್ತೊಂದು ಅಂಶವೆಂದರೆ ಈ ಅವಿದ್ಯಾವಂತ ಹಳ್ಳಿಗರ ಜೀವನೋಪಾಯ ಕೃಷಿಯಾಗಿರುವುದು. ಸಿದ್ಧಿಗಳು,ವಡ್ಡರುಗಳು,ಮಾದರರು ಹೀಗೆ ಕೆಳವರ್ಗದವರೆಂದು ಕರೆಯಲ್ಪಡುವ,ನೋಡಲು ಕೊಳಕಾಗಿ,ಒರಟಾಗಿ ಕಾಣುವ ಇಲ್ಲಿಯ ಜನ ಲೀಟರುಗಟ್ಟಲೆ ಹಾಲನ್ನು ಪ್ರತೀ ದಿನ ಹಾಲಿನ ಕೇಂದ್ರಗಳಿಗೆ ತರುತ್ತಾರೆ. ಅದೇ ಹಾಲು ಮರುದಿನ ಬೆಂಗಳೂರಿನಂಥ ಸಿಟಿಯ ವಿದ್ಯಾವಂತರ ದಾಹವನ್ನ ತೀರಿಸುತ್ತದೆ!

ಹಳಿಯಾಳದ ಹಳ್ಳಿಗಳಂತೆ ದೇಶದ ನಾನಾ ಭಾಗಗಳಲ್ಲಿನ ‘ಹಿಂದುಳಿದ’ ಹಳ್ಳಿಗಳು ಯಾವ ಕಾರಣಕ್ಕೂ ‘ಅಭಿವೃದ್ಧಿ’ಯಾಗದಿರಲಿ,ಕೃಷಿ ಸಂಸ್ಕೃತಿ ಉಳಿಯಲಿ….