November 5, 2012

ಸಿಕ್ಕಾಗಲೆಲ್ಲ ನಗೆಯ ಚೂರ
ಕಿಸೆಗೆ ತುರುಕಿ ಕಾನೆಯಾಗುವ
ಜನರ ಒಂಟಿತನದ ನಶೆಗಿಂತ,
  ಹನಿ ಹನಿಯಾಗಿ ಒಳಗಿಳಿದು
  ಕುರುಡಾಗಿಸಿ ಮರುಕ್ಷಣವೇ
  ವಿಸ್ಮಯದ ಮಿಂಚು ಹೊಳೆಯಿಸುವ
  ಅಕ್ಷರಗಳ ಚಮತ್ಕಾರಕ್ಕಿಂತ
    ವರ್ಷಕ್ಕೆರಡು ಬಾರಿ ಊರಿಗೆ ಹೋದಾಗ
    ಬೇಕೆಂದೇ ನನ್ನ ಹೊರಗಿನವನನ್ನಾಗಿಸುವ
    ತೋಟದ ಮರಗಳ ಹುಳಿಕೋಪ
    ವಿಚಿತ್ರವಾಗಿ ಆಕರ್ಷಿಸುತ್ತದೆ!
ಈ ಸಂಜೆ ಹೀಗೇ ಉಳಿದುಬಿಟ್ಟಿದ್ದರೆ
ಎಷ್ಟು ಸುಖವಾಗಿರುತ್ತಿತ್ತು!
ಮರಿಯೆಡೆಗೆ ಹಕ್ಕಿ,ತೀರದೆಡೆಗೆ ಅಲೆ
ಪ್ರೀತಿಯೆಡೆಗೆ ಜೀವ
ನಗುವಿನೆಡೆಗೆ ಬೆಚ್ಚಗಿನ ಸಂವೇದನೆ
ಬೆಳಕಿನೆಡೆಗೆ ಶುಭ್ರ ಕತ್ತಲು...
ಈ ಪ್ರಶಾಂತ ಪಯಣದ
ಅತೀತತೆಯನ್ನು ಮೀರುನಂಥದ್ದೇನಿದೆ
ಇಲ್ಲಿ?
ಇದು ಹೀಗೇ ಉಳಿದುಬಿಟ್ಟಿದ್ದರೆ
ಆಸೆ,ನೋವು,ಅಕ್ಷರಗಳ
ಗುರುತು ಮರೆಯುತ್ತಿತ್ತು!

ಉಪಾಯ-ದೌರ್ಬಲ್ಯ

ನಿಜ. ನಿನಗೆ
ನಿಷ್ಠನಾಗದಿರುವುದೇ ನನ್ನ
ಉಪಾಯ ಮತ್ತು
ದೌರ್ಬಲ್ಯ.

ಎಡವಿದ ಮೇಲೆ ಹಿಡಿದ ದಾರಿ
ಹುಡುಕುತ್ತಿದ್ದುದಲ್ಲವೆಂಬ ಸಂಶಯ
ದಾರಿ ತಪ್ಪಿದವ ಇಂಗ್ಲೀಷಿನಲ್ಲಿ
ದಾರಿ ಕೇಳಿದಾಗ
ಬಂದರೂ ಬಾರದಂತೆ
ಹೆಜ್ಜೆ ಹಾಕುವುದು ನನ್ನ
ಉಪಾಯ ಅಥವಾ
ದೌರ್ಬಲ್ಯ.

ನಕ್ಷತ್ರದಿಂದ ನಕ್ಷತ್ರಕ್ಕೆ
ಗೆರೆಯೆಳೆದು ರಂಗೋಲಿ ಹಾಕಿ
ಉಪಗ್ರಹ  ಸುತ್ತಾಡಿ
ಇಷ್ಟೆಂದರೆ ಇಷ್ಟೆಂದು
ನಕ್ಷತ್ರಿಕರೆಲ್ಲ ಬಡಕೊಂಡರೂ
ಬರಿಗೈಯಿಂದ ಗೆರೆ-
ಯೆಳೆದುಕೊಳ್ಳುವುದು ಅವರವರ
ಉಪಾಯ ಮತ್ತು
ದೌರ್ಬಲ್ಯ!

ತೊಟ್ಟಿ ತುಂಬಿ ತುಳುಕುವಾಗ
ನಾಯಿ ರಾಗ ತೆಗೆವ ಮುನ್ನ
ಎಂಜಲು ಕೈ ತೊಳೆಯದೇ
ಮೂಸಿ ಮೂಸಿ ಒಮ್ಮೆಯಾದರೂ
ರುಚಿ ನೋಡಿ ಬಡುಕಿಬಿಡುವುದು
ನಮ್ಮ ಉಪಾಯ,
ಅಲ್ಲ ದೌರ್ಬಲ್ಯ!!!

November 2, 2012

ಕವಿತೆ
ಬರೆಯಬೇಕು ಅಂದುಕೊಳ್ಳುವುದೇ
ಒಂದು ಚೆಂದದ
ಕವಿತೆ!
ಕಂಡಿದ್ದು ಕಾಣದ್ದು
ಅಂಟಿಸಿ ಕಿತ್ತು ಜೋಡಿಸಿ
ಕೊನೆಗೂ ಅದು 'ಕ್ಲಿಕ್' ಆಗುವುದು
ಏನೂ ಬರೆಯದೇ
ಉಳಿದುಬಿಡುವ ವ್ಯಂಗ್ಯದಲ್ಲೇ!!!

September 29, 2012

ಅನರ್ಥ ಗೀತ!!!

* ನಿದ್ದೆ ನಿಯತಕಾಲಿಕ,
   ಎಚ್ಚರ ತಾತ್ಕಾಲಿಕ!

* ಗಿಡದ ಮುಳ್ಳು ಚುಚ್ಚುತ್ತದೆ,
   ಗಡಿಯಾರದ ಮುಳ್ಳು ಸುತ್ತುತ್ತದೆ!

* ಸೂರ್ಯ ಉರಿದು ಕುಸಿದು ಬಿದ್ದ,
   ಚಂದ್ರ ಸುಡಲು ಎದ್ದು ನಿಂತ!



September 7, 2012

ಚೌಡಯ್ಯನ ಕಥೆ ಕೇಳಿ
ಮೂರ್ತಿಗಳಿಗೆ ಆ-
ಕಳಿಕೆಯಯ್ಯ, ಕಾ-
ಪಾಡಯ್ಯ!

(ಅಂಬಿಗರ ಚೌಡಯ್ಯ ಅಧ್ಯಯನ ಪೀಠದ ಪ್ರಚಾರೋಪನ್ಯಾಸ ಕಾರ್ಯಕ್ರಮದಲ್ಲಿ..!)

August 28, 2012

'ಭಾವಾತಿರೇಕ ಬರಹಕ್ಕಿರಲಿ ಬದುಕಿಗಲ್ಲ'
ಯಾರೋ ಹೇಳಿದ ಮಾತ್ರಕ್ಕೆ
ಬೆಂಕಿ ಸುಡುವುದನ್ನು
ಬಿಡುವುದಿಲ್ಲ!!!

August 24, 2012

ವಾಸ್ತವ

ಮೊನ್ನೆ ಖಾಲಿಯಾದ ಪ್ರೀತಿ
ನಿನ್ನೆ ಹಳಸಿದ ಸ್ನೇಹ
ಯಾವತ್ತೋ ಕಳೆದುಹೋದ ನಗು
ಹುಡುಕಿ,ಕೊಳ್ಳುವ ಹುಚ್ಚು ನನಗೆ...

ಯಾರ ಅಂಗಡಿಯಲ್ಲಿ?
ಯಾವ ರಸ್ತೆಯ ಬದಿಯಲ್ಲಿ?
ಯಾರ ಮನೆಯಂಗಳದಲ್ಲಿ?
ಯಾವ ಪಟ್ಟಣದ ತೊಟ್ಟಿಯಲ್ಲಿ?
ಅಥವಾ...ಮತ್ತೆಲ್ಲಿ???

ಎಲ್ಲಿ? ಎಷ್ಟು? ಹೇಗೆ?
ಚಕ್ರವ್ಯೂಹದೊಳಗೆ ಶಿಖಂಡಿ ಕೂತಿದ್ದಾನೆ!
ಉಸಿರಿಗೇ ಗತಿಯಿಲ್ಲ,
ಪ್ರಹಾರ ದೂರದ ಮಾತು!

ಬಂದಿದ್ದು ನೆನಪಿಲ್ಲ,
ಹೋಗುವುದು ತಿಳಿದಿಲ್ಲ,
ಇರುವಿಕೆಯೇ ಅನುಮಾನ...
ಹೀಗೂ ಒಂದು ವಾಸ್ತವ!!!