March 4, 2013

ಕೇಸರಿ ಬಣ್ಣದ ಪೆಟ್ರೋಲಿನಿಂದ
ಬೆಂಕಿ ನಂದುವುದಿಲ್ಲ,
ಬಣ್ಣವಿಲ್ಲದ ನೀರಿನ ತಂಪನ್ನು
ನಮ್ಮ 'ದೇಶಭಕ್ತರು' ಕಂಡಿಲ್ಲ!

ಯುದ್ಧಗೀತ


ನಾನು ಯುದ್ಧ ಕಂಡಿಲ್ಲ.

ಉಪಾಯ ಹೂಡಿ,ಮೋಸ ಮಾಡಿ
ಆನೆ ಕುದುರೆ ಸೈನ್ಯ ಕಟ್ಟಿ
ರಥ ಹತ್ತಿ ಮಾಡುವ ಯುದ್ಧಕ್ಕಿಂತ
ಈಗಿನ ಕ್ಷಿಪಣಿ-ಅಣುಬಾಂಬುಗಳವರೆಗೆ
ಕೇಳಿದ್ದು ಕಥೆಯಲ್ಲೇ
ಓದಿದ್ದು ಪುಸ್ತಕದಲ್ಲೇ
ನೋಡಿದ್ದು ಟೀವಿಯಲ್ಲೇ!

ಆದರೂ,
ಬಾಣಬಿಟ್ಟು ಸುಮಾರು ಹೊತ್ತು ಕಾಯುವ
ಬಾಂಬುಹಾಕಿ ಎಲ್ಲ ನೆಲಸಮಮಾಡುವ
ಯುದ್ಧಗಳಿಗಿಂತ ಚಂದ ಮತ್ತು ಮಜ
ಮಶೀನು ಗನ್ನಿನ ಯುದ್ಧ!

ಶಬ್ದ ಬರುವ ಹೊತ್ತಿಗೆ
ಗುಂಡು ಒಂದರ ಹಿಂದೆ ಮತ್ತೊಂದು
ನಿಷ್ಠೆಯಿಂದ,ಶಿಸ್ತಿನಿಂದ,ದರ್ಪದಿಂದ
ಸಾಲಾಗಿ ಒಳನುಗ್ಗಿ ಎದೆ,ಹೊಟ್ಟೆ ಮತ್ತೆ
ಕೆಲವೊಮ್ಮೆ ತಲೆಚಿಪ್ಪಿನ ಒಳಗೆಲ್ಲೋ
ಅವಿತು ಕುಳಿತು ಚಿಮ್ಮಿಸುವ
ಬಿಸಿ ರಕ್ತದ ಹನಿಗಳು
ನೆಲ ತಲುಪುವ ಮೊದಲೇ
ಯಾರಿಗೂ ಕಾಣದಂತೆ ಪ್ರಾಣಪಕ್ಷಿಯ
ರೆಕ್ಕೆ ಕಿತ್ತು ಹಾರಿಸುವ ಯುದ್ಧ!

ಈ ಹಾಳು ಯುದ್ಧದ ವಿಷಯದಲ್ಲೇ
ಕೆಲವು ಅಸ್ಪಷ್ಟತೆಗಳು ಕೂಡ:
ಯಾವತ್ತಾದರೂ ಮಾಡಲೇಬೇಕಾದ ಯುದ್ಧಕ್ಕೆ
ತಾತ್ಕಾಲಿಕ ವಿರಾಮ,
ಕೆಲವು ದೇಶಗಳ ಮಧ್ಯೆ ಮಾತ್ರ ಯುದ್ಧ
ಕೆಲವದರ ಮಧ್ಯೆ ಮೈತ್ರಿ-ಒಪ್ಪಂದ,
ಹಪ್ಪಳ ಸಂಡಿಗೆಗಳಂತೆ ಕೂಡಿಟ್ಟ
ಶಸ್ರ್ತಾಸ್ತ್ರಗಳ ಪ್ರಾಯೋಗಿಕ ಪರೀಕ್ಷೆ,
ದೇಶದ ಕೋಟಿ ಜನರಲ್ಲಿ
ಕೆಲವರಿಗೆ ಮಾತ್ರ ಸೈನ್ಯ ತರಬೇತಿ,
ಯುದ್ಧ ಕಂಡರಿಯದವನಿಂದ
ಉದ್ದದ ದೇಶಭಕ್ತಿಗೀತೆ,
ಗುಂಡು ತಿಂದು ಸತ್ತವನೆದುರು
ರಾಷ್ಟ್ರಗೀತೆ,ಗಾಳಿಯಲ್ಲಿ ಗುಂಡು!

ಹಾರಿದ ಗುಂಡು ವಾಪಸ್ಸು ಬಂದಿದ್ದನ್ನು
ಯಾರೂ ಕಂಡಿಲ್ಲ!

December 6, 2012

ಕೈ ಹಿಡಿದು ಸುತ್ತಬೇಕೆಂದಿಲ್ಲ 
ಎದೆಯ ಕದ ತಟ್ಟಬೇಕೆಂದಿಲ್ಲ
ಒಳಬಂದು ಕೂರಬೇಕೆಂದಿಲ್ಲ
ಅರಿವಾಗದಂತೆ ಆವರಿಸಿ
ನನ್ನದನ್ನೆಲ್ಲ ಸೂರೆಗೊಳ್ಳಬೇಕೆಂದಿಲ್ಲ...
ಇಲ್ಲ...ಮತ್ತೇನನೂ ನೀ ಮಾಡಬೇಕೆಂದಿಲ್ಲ.

ಸಿಕ್ಕಾಗ ಒಮ್ಮೆ
ನಕ್ಕುಬಿಡು ಸಾಕು;
ಒಂದು ಕನಸಿಗೆ,
ಒಂದು ಕವಿತೆಗೆ...

November 27, 2012

ಎಲ್ಲ ಓಡುತ್ತಿರುವಾಗ
ಸುತ್ತ ಸುತ್ತುತ್ತಿರುವಾಗ
ಆ ಮರ,ಆ ಕಲ್ಲು
ಲೈಟು ಕಂಬ,ರೋಡು,ಮನೆ
ಶಾಲೆ,ಪುಸ್ತಕ,ಶಬ್ದ,ಅರ್ಥ...
ಹೀಗೇ ಕೆಲವು
ಇದ್ದಲ್ಲೇ ಇದ್ದಂತೇ ಉಳಿದುಬಿಟ್ಟಿರುವುದು
ಕ್ರೌರ್ಯ ಮತ್ತು ಸೌಂದರ್ಯ...

November 26, 2012

ಬಿನ್ನಹ


ತಲೆದಿಂಬಿನ ತುಂಬೆಲ್ಲ
ಕೆಂಗುಲಾಬಿ ಮುಳ್ಳು
ಬಚ್ಚಲಮನೆ ಹಾಡಿಗೆ
ಭಾವನೆಗಳ ತೆವಲು
ಶಬ್ದ ಮಾಡೋ ಎದೆಯೊಳಗೆ
ಮರಳು ಸಿಮೆಂಟು ಕಲ್ಲು
ಈಗಷ್ಟೆ ಹುಟ್ಟಿದ ಕವಿತೆಗೆ
ಸುರುಳಿ ಮುಂಗುರುಳಿನುರುಳು...
ಸಾಕು,
ಇನ್ನಾದರೂ ಬಿಟ್ಟುಬಿಡು!!

November 20, 2012

' ಕನ್ನಡ '

( ಸ್ಪರ್ಧೆಯೊಂದಕ್ಕಾಗಿ ಬರೆದ ಕವನ )

ಕನ್ನಡಿಯಲ್ಲಿ ಕನ್ನಡ
ತಿರುಗು ಮುರುಗಾಗಿ ಮರುಗುವ
ಡೊಂಕು ಗೆರೆಗಳ ಮೆರವಣಿಗೆ!

*********************

ಸಂಗ್ರಹಾಲಯದ ತುಂಬ
ಎಷ್ಟೊಂದು ಕನ್ನಡಿಗಳು..!

ಮುಚ್ಚೋ ಶಾಲೆ ಬಾಗಿಲಲ್ಲಿ
ಟ್ಯೂಷನ್ ಕ್ಲಾಸಿನ ಪಾಠದಲ್ಲಿ
ನೇತಾಡೋ ಪಟದ ಚೌಕಗಳಲ್ಲಿ
ಮುದ್ದೆ ರದ್ದಿ ಪೇಪರಿನಲ್ಲಿ
ರೈಲು ಟಿಕೇಟಿನ ಚೂರಿನಲ್ಲಿ
ಬಣ್ಣದ ಮೊಬೈಲು ಪರದೆಯಲ್ಲಿ
ಸ್ವಂತ ಅಪರಿಚಿತ ಸಾಹಿತ್ಯದಲ್ಲಿ
ಆಟೋ ರಿಕ್ಷಾಗಳ ಬೆನ್ನಿನಲ್ಲಿ
ಕೊಚ್ಚು-ಬಿಚ್ಚು ಗೀತೆಗಳಲ್ಲಿ
ಮಾಯಾನಗರಿಯ ಮಾಲುಗಳಲ್ಲಿ
ನವೆಂಬರ್ ತಿಂಗಳ ಗದ್ದಲದಲ್ಲಿ
ಚಾ-ತಿಂಡಿ ಸಭೆಗಳಲ್ಲಿ
ಉದ್ಘಾಟನೆ-ಸಮಾರೋಪ ಸಮ್ಮೇಳನಗಳಲ್ಲಿ
ಧಿಕ್ಕಾರ-ಜೈಕಾರ ಗಲಭೆಗಳಲ್ಲಿ
ಸಮೀತಿ-ಸಮೀಕ್ಷೆಗಳ ಅಡಿಗಲ್ಲಿನಲ್ಲಿ
ಹೊಸಪಕ್ಷಗಳ ಚಿಹ್ನೆಯಡಿಯಲ್ಲಿ
ಸವೆಯುತ್ತಲೇ ಇರುವ ಶಾಸನಗಳಲ್ಲಿ...

ಚಿತ್ರ ವಿಚಿತ್ರ ಕನ್ನಡಿಗಳು
ಪಕ್ಕದಲ್ಲೇ 'ಮುಟ್ಟಬಾರದು' ಬೋರ್ಡುಗಳು!

*************************

ಇನ್ನಾದರೂ ಹಲ್ಲುಜ್ಜಿ ಮುಖ ನೋಡಿಕೋ
ಸೊಟ್ಟಗೆ ಕಂಡರೆ
ನೀನು ಪಕ್ಕಾ ಕನ್ನಡಿಗ! 

November 17, 2012

ಓದೆಂದರೂ ಓದುವುದು ಬೋರು
ಕ್ಲಾಸಿಕ್ಸು,ನೋಟ್ಸು,ಕ್ರಿಟೀಕು
ಓದಿದರೆ ಓದಿದಂತಾಗಬೇಕು
ಲಂಕೇಶ್ ಪತ್ರಿಕೆಯ ಪೋಲಿ ಚುಟುಕು!

ಸಮಸ್ಯೆ

ಕತ್ತಲ ಗುರುತಿಸಲು
ಬೆಳಕು ಕಂಡಿರಬೇಕು,
ಕನಸು ಕಟ್ಟುವುದಕ್ಕೂ
ಕಾಣೆಯಾಗಿರಬೇಕು,
ಅತ್ತುಬಿಡುವುದಕ್ಕೂ
ಭಾವನೆಗಳು ಬೇಕು,
ಇಲ್ಲವಾಗುವುದಕ್ಕೂ
ಇದ್ದೆನೆಂಬುದು ಬೇಕು,
ಸರಿಯಾಗಿಲ್ಲ ಅನ್ನುವುದಕ್ಕೂ
ತಪ್ಪಾಗಿರುವುದು ಬೇಕು.
ಹೀಗೇ ಕಡೇಪಕ್ಷ
ಸುಮ್ಮನೇ ಗೀಚುವುದಕ್ಕೂ
ಏನೇನೋ ಬೇಕು!

ಅದೇ ಸಮಸ್ಯೆಯಾಗಿರುವುದು...