November 23, 2013

ಮೆಚ್ಚಿದ ಪುಸ್ತಕ

ದೇವನೂರು ಮಹಾದೇವರ 'ಎದೆಗೆ ಬಿದ್ದ ಅಕ್ಷರ' ಓದುತ್ತಿದ್ದೇನೆ. ಮೇಲ್ವರ್‍ಗದ,ಮೇಲ್ಜಾತಿಯ ಬಹುತೇಕ ಮಂದಿ ಕಾಣದ ಮತ್ತು ಕಾಣಬಯಸದ ಜಗತ್ತನ್ನು ತೆರೆದಿಡುವ ಪುಸ್ತಕ ಇದು..ಇಲ್ಲಿ ಆಳುವವರ ಬಗ್ಗೆ ಆಕ್ರೋಶವಿದೆ,ಆದರೆ ಅದು ಸಿದ್ಧಲಿಂಗಯ್ಯನವರ ಕವನಗಳಲ್ಲಿರುವಂತೆ ಕೊಚ್ಚು,ಮುರಿ ಅನ್ನುವಂಥದ್ದಲ್ಲ..ಬದಲಿಗೆ ಸಮಾನತೆಯ ಕನಸನ್ನು ಪ್ರತೀ ಕ್ಷಣವೂ ಕಾಣುವಂಥದ್ದು.. ನೂರಾರು ವರ್ಷಗಳಿಂದ ಕಾಪಾಡಿಕೊಂಡು ಬಂದ ಕೀಳು ಮನಸ್ಸಿನಿಂದ ಇನ್ನಾದರೂ ಹೊರಬರೋಣ ಎನ್ನುವಂಥದ್ದು...ಧರ್ಮದ ನೆಲಗಟ್ಟಿನ ಮೇಲೆ ದೇಶ ಕಟ್ಟಲು ಹೊರಟಿರುವ ಕುರುಡರ ಸಂತೆಯ ಮಧ್ಯೆ ಈ ಕಾರಣಕ್ಕಾಗಿಯೇ ದೇವನೂರು ಅತ್ಯಗತ್ಯವೆನಿಸುತ್ತಾರೆ...

November 21, 2013

ಪ್ರತಿಷ್ಥೆ,ಇಸಮ್ಮು
ವಾದ ವಿವಾದಗಳೆಲ್ಲ
ಬರೆದವರಿಗೆ;
ಈ ಪುಸ್ತಕಗಳು
ಕೊಂಡವರ ಜತೆ
ಆರಾಮಾಗಿ ಇದ್ದುಬಿಡುತ್ತವೆ!!!

*****************

ನೀರಂತೆ
ಕಾವ್ಯ
ಕುಡಿಯಲೇಬೇಕು!

*****************

ಕರಾವಳಿಯ
ಮಳೆ,ಬಿಸಿಲು
ಬಂದರೆ ಸಾಕೆಂದರೂ
ಮುಗಿಯುವುದಿಲ್ಲ
ಕಾವ್ಯದಂತೆ!

November 17, 2013

‌ನನಗೆ
ನನ್ನ ತೋರಿಸುವ
ಕನ್ನಡಿಯ ಬೆನ್ನ ಹಿಂದೆ
ಯಾರಿಗೂ ಕಾಣದ
ಅನಾಥ ಬಯಲು!

****************

ತುಂಬ ಕಾಯಿಸಬೇಡ ಗೆಳತಿ,
ಉಕ್ಕಿ ಚೆಲ್ಲೀತು
ಹಾಲು!

****************

ಪ್ರತೀ ಚೂರು
ಅಕ್ಷರದ ಬೆನ್ನಿಗೆ
ಏನೂ ಹುಟ್ಟದ
ಬರಡು ಸ್ಥಿತಿ... 

****************

ಕೆಟ್ಟದಾಗಿದ್ದರೂ
ಅನುಭವಗಳು
ಒಳ್ಳೆಯದು...

****************

ಬೆಳಕೆಂದರೆ ಬೆಳಕು
ಕತ್ತಲೆಂದರೆ ಕತ್ತಲು
ಬೇಕಾದ್ದು ಕಾಣುವುದು
ಕಣ್ಣಲ್ಲಿ ಮಾತ್ರ!

November 16, 2013

ಸಂತೆ

ಇವರೆಲ್ಲರೂ ಅವರೇ 
ಬೆಳಕ ಕಾಣದ ಬಿಳಿ ಹುಡುಗಿ 
ದೃಷ್ಟಿ ಬೊಟ್ಟಿಡದ ಕಪ್ಪು ಹುಡುಗಿ
 ಪೊರಕೆಗಳ ಹೊತ್ತ ಘಾಟಿ ಮುದುಕಿ 
ಸೊಪ್ಪು ಮಾರುವ ಪುಟ್ಟ ಕಿರಣ 
'ಧಾ ರೂಪಾಯ್ ಪನ್ನಾಸ್'
'ರುಚಿ ನೋಡಿ ರೇಟು ಮಾಡಿ'
ಹರಕು ಚಪ್ಪಲಿಯ ಹುಳುಕು ಅರ್ಚಕ 
ಕಡ್ಡಿ ಗಡ್ಡದ ಬುಡಾನ್ ಸಾಬಿ 
ಕಿರಾಣಿ ಅಂಗಡಿಯ ತಕರಾರುಕರ 
ದೊಗಳೆ ಅಂಗಿಯ ಕುಳ್ಳ ಮಾಸ್ತರ 
ಪ್ಯಾಂಟು ನೈಟಿ ಇತರೆ ವಸ್ತ್ರ 
ಇಪ್ಪತ್ತು ರೂಪಾಯಿಗೆ ಗಿಣಿ ಶಾಸ್ತ್ರ 
ಬೋಂಡ ಹಪ್ಪಳ ಹಂದಿ ಸೊಳ್ಳೆ 
ಹೂವು ಸಗಣಿ ಈರುಳ್ಳಿ ಬಳೆ 
ಬೇರು ವಾಚು ಒಣಗಿದ ಮೀನು 
ಕನ್ನಡಿ ಬೂದಿ ಗುಡ್ಡದ ಜೇನು 
ಅಮ್ಮನ ಕುಂಕುಮ ಫ್ರೇಮಿನ ರಾಮ 
ಹಾಡುವ ಸೀತೆ ಬೇಡುವ ಹನುಮ... 

ಇವರೆಲ್ಲರೂ ಅವರೇ 
ತಪ್ಪುಗಳ ಮಧ್ಯೆ ಹುಟ್ಟಿ 
ತಪ್ಪುತ್ತಲೇ ಬೆಳೆದು 
ಒಪ್ಪಿಸಲಾಗದೆ ಓಡಿ 
ಹೊಟ್ಟೆ ತುಂಬಲು 
ಮಾರಾಟಕ್ಕಿಳಿದವರು. 

ಇರುವ ತಪ್ಪಿಗೆ 
ಕಿರುಚಿ ನಾರುವ ಈ ಬೀದಿ 
ನಿನ್ನೆ ಖಾಲಿ ನಾಳೆಯೂ ಖಾಲಿ.

ಅದೇ ಮುಖದ ಅದೇ ಚೌಕಾಸಿಯ 
ಅದೇ ತೂಕದ ಅದೇ ಲೆಕ್ಕದ 
ಲಾಭ ನಷ್ಟದ 
ದಣಿವು ಕಾಣದ 
ಅದೇ ಸಂತೆಯ ಅದೇ ವ್ಯಾಪಾರ 
ಈ ಕ್ಷಣದ ಸತ್ಯ,
ಕಳೆದುಹೋಗುವ ಮುನ್ನ 
ಕೊಂಡುಕೊಳ್ಳಿ!
ಹೊಸತಾಗಿ ಬರೆಯಬೇಕೆಂದುಕೊಂಡವ
ಹಳತನ್ನೇನಾದರೂ ಓದಿಬಿಟ್ಟರೆ 
ಅದು ಅವನ ಸಾವು!!!

*************************

ಜೈಲಲ್ಲಿ ಆರಾಮಾಗಿ
ನಿದ್ದೆ ಮಾಡುವವನು 
ಸ್ವರ್ಗ ಸೇರಲು 
ಪುಣ್ಯ ಮಾಡಬೇಕಿಲ್ಲ!!!

June 9, 2013

ಈ ಮಧ್ಯರಾತ್ರಿ
ಸುಮ್ಮನೆ ಕೂರುವ
ಸೊಳ್ಳೆ ಹೊಡೆಯುವ
ಆಕಳಿಸುವ
ನೋಡುವ
ಓದುವ
ಕೇಳುವ
ಹರಟುವ
ಆಡುವ
ಅಲೆವ
ಕಳೆವ
ಬದಲು
ಬರೆ-
ಯುತ್ತಿದ್ದೇನೆ!!!
ಏಳು,ತಿನ್ನು
ಕೆಲಸ ಮಾಡೆಂದ ಅಮ್ಮ
ಬರೆ ಅನ್ನಲಿಲ್ಲ.
ಹೊಸ ಹೆಂಡತಿಯಂತೆ
ಮುನಿಸಿಕೊಂಡು ಕವಿತೆ ಕೇಳುತ್ತಿದೆ
'ಆರು ಹಿತವರು ನಿನಗೆ
ನಮ್ಮೀರ್ವರೊಳಗೆ?!!!'

June 5, 2013

ಖ್ಯಾತ ಪಂಜಾಬಿ ಲೇಖಕಿ ಅಮೃತಾ ಪ್ರೀತಮ್ ರ 'ಸುನೇರಿ'ಯನ್ನು ಮತ್ತೆ ಓದುತ್ತಿದ್ದೇನೆ. ತುಂಬಾ ಇಷ್ಟವಾದದ್ದು ಲೇಖಕಿಯ ironic language. ಉದಾಹರಣೆಗೆ,

' ಈ ಭೂಮಿ_
ಒಂದು ಸುಂದರ ಪುಸ್ತಕ.
ಸೂರ್ಯ ಚಂದ್ರರೇ ಅದರ ರಕ್ಷಾಪತ್ರ.

ಆದರೆ_
ಹಸಿವು
ಬಡತನ
ದಾಸ್ಯ...

ದೇವರೇ,
ಇದೇನು ನಿನ್ನ ಪ್ರವಚನಗಳೆ?
ಅಥವಾ
ಬರಿಯ ಅಚ್ಚಿನ ತಪ್ಪುಗಳೆ? '

ಸುಮ್ಮನೆ ಕೂತಾಗ ಓದಿ ಅನುಭವಿಸಬಹುದಾದ ಇಂಥ ಹಲವು ಕವನಗಳು 'ಸುನೇರಿ'ಯಲ್ಲಿವೆ. ಮಡಿವಂತಿಕೆಯಿಂದ ದೂರದಲ್ಲಿಯೇ ಉಳಿಯುವ ಅಮೃತಾ ಪ್ರೀತಮ್ ಓದುಗರಿಗೆ ಆಪ್ತವಾಗುತ್ತಾರೆ. ಭಾರತದ ಮಟ್ಟಿಗೆ ಹೀಗೆ ಬದುಕಿದಂತೆಯೇ ಬರೆದ ಲೇಖಕಿಯರು ತುಂಬಾ ವಿರಳ....