April 16, 2014

'ನೂರು ದೇವರನೆಲ್ಲಾ ನೂಕಾಚೆ ದೂರ...'
'ಕುಲ ಕುಲ ಕುಲವೆಂದು ಹೊದೆದಾದದಿರಿ...'
'...ಸರ್ವ ಜನಾಂಗದ ಶಾಂತಿಯ ತೋಟ...'
. . . 
ರಾಗವಾಗಿ ಹಾಡೋಕೆ ಎಲ್ಲ ಹಾಡುಗಳೂ ಇಂಪಾಗಿಯೇ ಇರುತ್ತವೆ;ಸ್ವಾತಂತ್ರ್ಯ ದಿನಾಚರಣೆ,ಗಣರಾಜ್ಯೋತ್ಸವ,ಅಂಬೇಡ್ಕರ್ ಜಯಂತಿ,ಗಾಂಧಿ ಜಯಂತಿಯ ಭಾಷಣಗಳೂ ಸ್ಪೂರ್ತಿದಾಯಕವಗಿರುತ್ತವೆ;ಇನ್ನು ನಮ್ಮ ಜಗದ್ಗುರುಗಳ,ಧರ್ಮ ಸಂಸ್ಥಾಪಕರ,ದೇಶವನ್ನು ಜಾಗೃತವಾಗಿಡುವವರ ಪ್ರವಚನಗಳಂತೂ ಪ್ರಶ್ನೆಗಳಿಗೆ ನಿಲುಕದ್ದು!
ಹೀಗೆ ಎಲ್ಲ ಇಂಪಾಗಿ,ಧನಾತ್ಮಕವಾಗಿ,ಆರೋಗ್ಯಕರವಾಗಿಯೇ ಇದೆ,ವಾಸ್ತವವೊಂದನ್ನು ಹೊರತುಪಡಿಸಿ!

ನಮ್ಮನೆ ತೋಟದಲ್ಲಿ ನಮಗಿಂತ ಹೆಚ್ಚು ಕಾಲ ಕಳೆಯೋ ಗಿಡ್ಡನ ಹೆಗಲ ಮೇಲೆ ಕೈ ಹಾಕಿ ಪ್ರೀತಿಯಿಂದ ಮಾತಾಡುವಂತಿಲ್ಲ,ಮನೆಯೊಳಗೆ ಊಟ ಬಡಿಸುವಂತಿಲ್ಲ,ಅವನ ಮನೆಯೊಳಗೆ ಹೋಗುವಂತಿಲ್ಲ...ಎಲ್ಲಕ್ಕಿಂತ ಮುಖ್ಯವಾಗಿ ಇಂಥದ್ದನ್ನೆಲ್ಲ ಪ್ರಶ್ನಿಸುವಂತಿಲ್ಲ,ಈ ರೀತಿ ಯೋಚಿಸುವಂತಿಲ್ಲ...ಬರೀ ನಿಶೇಧಗಳೇ!

ಭಾರತದ ಭಾವೀ ಸರ್ಕಾರವೆಂದೇ ಕರೆಯಲ್ಪಡುವ ಮೋದಿ ಸರ್ಕಾರದ ಪರಮೋಚ್ಚ ಗುರಿಗಳಲ್ಲೊಂದು ದೇವಸ್ಥಾನ ಕಟ್ಟುವುದು! ಎಂಥ ದೇವಸ್ಥಾನ? ಕೆಲವರು ಮಾತ್ರ ಪ್ರವೇಶಿಸಬಹುದಾದ,ಕೂತು ಊಟ ಮಾಡಬಹುದಾದ ದೇವಸ್ಥಾನ! ಚಪ್ಪಲಿಯಿಂದ ಕೂದಲಿಗೆ ಹಚ್ಚೋ ಬಣ್ಣದವರೆಗೆ ಆಧುನಿಕರಾಗಿರೋ ನಮಗೆ ದೇವಸ್ಥಾನಗಳು ಮಾತ್ರ ಆಧುನಿಕವಾಗಿರಬಾರದು. 'ಪುರುಷರಿಗೆ' 'ಸ್ತ್ರೀಯರಿಗೆ' ಎಂದು ಶೌಚಾಲಯಗಳ ಹೊರಗೆ ಬೋರ್ಡು ಹಾಕಿದಂತೆ 'ಇಂಥ ಜಾತಿಯವರಿಗೆ' ಎಂದು ದೇವಸ್ಥಾನಗಳ ಹೊರಗೆ ಬರೆಯೋದೊಂದು ಬಾಕಿಯಿದೆ!

ಧರ್ಮ,ಜಾತಿ,ಬಣ್ಣ,ಲಿಂಗ....ಅಸಮಾನತೆ ನಮಗೆ ಹೊಸತಲ್ಲ,ಆದರೆ ಇನ್ನೂ ಹಳತಾಗಿಲ್ಲ...'ತಿಳಿದವರ' ತಿಳಿಗೇಡಿತನ ಖಂಡಿತ ದುರಂತವಲ್ಲ,ಅದಕ್ಕಿಂತಲೂ ಅಪಾಯಕಾರಿಯಾದದ್ದು....

No comments:

Post a Comment